ಇರಿಟೇಬಲ್ ಬವೆಲ್ ಸಿಂಡ್ರೋಮ್ (IBS) ಎಂಬುದು ಕರುಳಿನ ಮೇಲೆ ಪರಿಣಾಮ ಬೀರುವ ಬಹುಅಂಶಗಳ ಜೀವನಶೈಲಿಯ ಆರೋಗ್ಯ ಸ್ಥಿತಿಯಾಗಿದೆ. ಇದರ ಪ್ರಮುಖ ಲಕ್ಷಣಗಳೆಂದರೆ ವ್ಯತ್ಯಯಗೊಂಡ ಮಲವಿಸರ್ಜನೆಗೆ (ಸಡಿಲ ಮಲವಿಸರ್ಜನೆ ಮತ್ತು ಮಲಬದ್ಧತೆ ಎರಡೂ ಪದೇ ಪದೇ ಉಂಟಾಗುವುದು) ಸಂಬಂಧಿಸಿದ ಕಿಬ್ಬೊಟ್ಟೆಯ ನೋವು ಮತ್ತು ಸುಸ್ತು.
ಆಯುರ್ವೇದ ಸಾಹಿತ್ಯ ಮತ್ತು ತಜ್ಞರು ಈ ಆರೋಗ್ಯ ಸ್ಥಿತಿಯನ್ನು ಗ್ರಹಣಿ ಎಂದು ಬಣ್ಣಿಸುತ್ತಾರೆ. “ಈ ಆರೋಗ್ಯ ಸ್ಥಿತಿಯು ಅಲ್ಸರೇಟಿವ್ ಕೋಲಿಟಿಸ್, ಅಮೀಬಿಕ್ ಡೀಸೆಂಟ್ರಿ ಮತ್ತು ಕ್ರಾನ್ಸ್ ಕಾಯಿಲೆಗೆ ಹೊಂದಿಕೊಳ್ಳುವ ಅನೇಕ ರೋಗಲಕ್ಷಣಗಳನ್ನು ಒಳಗೊಂಡಿದೆ,” ಎಂದು ಕರ್ನಾಟಕದ ಉಡುಪಿಯ ಧಾತ್ರಿ ಆಯುರ್ವೇದದ ಮುಖ್ಯ ಸಮಾಲೋಚಕರಾಗಿರುವ ಡಾ ಅಂಜಲಿಯವರು ಹೇಳುತ್ತಾರೆ.
ಮೊದಲ ಹೆಜ್ಜೆ
ವ್ಯಕ್ತಿಯು IBS ಚಿಕಿತ್ಸೆಗೆ ಆಯುರ್ವೇದ ತಜ್ಞರನ್ನು ಭೇಟಿ ನೀಡಿದಾಗ, ವಿಶೇಷವಾಗಿ ಅವರ ದೈನಂದಿನ ಚಟುವಟಿಕೆಗಳನ್ನು ನಿರ್ಧರಿಸಲಾಗುತ್ತದೆ. ಅವರು ಆಹಾರಾಭ್ಯಾಸಗಳು, ದೈಹಿಕ ಚಟುವಟಿಕೆಗಳು ಮತ್ತು ನಿದ್ರೆ ಹಾಗೂ ಕರುಳಿನ ಚಲನೆಯ ಮಾದರಿಗಳನ್ನು ಒಳಗೊಂಡಂತೆ ಸಮಗ್ರ ಇತಿಹಾಸವನ್ನು ಸಂಗ್ರಹಿಸುತ್ತಾರೆ. ಅಂಜಲಿಯವರು ಹೇಳುವಂತೆ, ವ್ಯಕ್ತಿಯು ಯಾವ ರೀತಿಯ ಆಹಾರಕ್ರಮವನ್ನು ಪಾಲಿಸುತ್ತಾರೆ ಎಂಬುದಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ.
ಆಯುರ್ವೇದ ತಜ್ಞರು ಈ ಆರೋಗ್ಯಸ್ಥಿತಿಗೆ ಸಂಬಂಧಿಸಿದ ಅಂಶಗಳನ್ನು ತೊರೆಯಲು ಸೂಚಿಸುತ್ತಾರೆ (ಆಹಾರಕ್ರಮ ಮತ್ತು ಜೀವನಶೈಲಿ). “ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದು, ಅಕಾಲಿಕವಾಗಿ ತಿನ್ನುವುದು, ಅತಿಯಾಗಿ ತಿನ್ನುವುದು ಮತ್ತು ಸಂಪೂರ್ಣ ಆಹಾರಗಳನ್ನು (ಧಾನ್ಯಳುಗಳು, ಹಣ್ಣುಗಳು, ತರಕಾರಿಗಳು ಮತ್ತು ಕಾಳುಗಳು) ಮುಂತಾದವು ಸಾಮಾನ್ಯವಾಗಿ ಗಮನಿಸಬಹುದಾದ ಅನಾರೋಗ್ಯಕರ ಆಹಾರಕ್ರಮಗಳು,” ಎಂದು ನಾಗ್ಪುರದ ಆರೋಗ್ಯವರ್ಧಿನಿ ಕ್ಲಿನಿಕ್ನ ಮುಖ್ಯ ಸಮಾಲೋಚಕರಾದ ವೈದ್ಯ ನಿತೀನ್ ಅಂಬಟ್ಕರ್ ಅವರು ಹೇಳುತ್ತಾರೆ.
ಇರಿಟೇಬಲ್ ಬವೆಲ್ ಸಿಂಡ್ರೋಮ್ (IBS) – ಸಾಮಾನ್ಯ ಪರಿಗಣನೆಗಳು
ಈ ಸ್ಥಿತಿಯು ಕರುಳಿನ ಮೇಲೆ ಪರಿಣಾಮ ಬೀರುವುದರಿಂದ, ಇದು ತೀವ್ರವಾಗುವುದನ್ನು ತಪ್ಪಿಸಲು ಶಿಸ್ತಿನ ಆಹಾರಕ್ರಮವನ್ನು ಪಾಲಿಸುವುದು ಮುಖ್ಯ.ಇದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯಾತ್ಯಾಸವಾಗಬುಹುದು. ಯುಕೆಯ ಎನ್ಎಚ್ಎಸ್, IBS ಅನ್ನು ಪ್ರಚೋದಿಸುವ ಆಹಾರಗಳನ್ನು ಪಟ್ಟಿ ಮಾಡಿದೆ.
- ಸಲಾಡ್ಗಳು, ಗೋಧಿ ಬ್ರೆಡ್, ಒಣ ಹಣ್ಣುಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಸ್ವೀಟ್ಕಾರ್ನ್ ಮುಂತಾದ ನಾರಿನಂಶವುಳ್ಳ ಆಹಾರದ ಅತಿಯಾದ ಸೇವನೆ
- ಪೇಸ್ಟ್ರಿ, ಬೆಣ್ಣೆ, ಹಾಲಿನ ಕೆನೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಚಿಪ್ಸ್, ಬೀಜಗಳು ಮುಂತಾದ ಆಹಾರಗಳು
- ಹಾಲು, ಹಾಲಿನ ಕೆನೆ, ಚೀಸ್, ಬೆಣ್ಣೆ ಮುಂತಾದ ಹಾಲಿನ ಉತ್ಪನ್ನಗಳು
- ಗೋಧಿ ಆಧಾರಿತ ಆಹಾರಗಳಾದ ಬ್ರೆಡ್, ಪಾಸ್ತಾ, ವೀಟಾಬಿಕ್ಸ್, ಇತರ ಧಾನ್ಯಗಳು, ಕೇಕ್, ಬಿಸ್ಕೆಟ್ಗಳು
- ಇದರೊಂದಿಗೆ, ಈರುಳ್ಳಿ, ಕಾಫಿ, ಆಲೂಗಡ್ಡೆ, ವೈನ್ ಮತ್ತು ಇತರ ರೀತಿಯ ಮದ್ಯ
ಆಹಾರಕ್ರಮದ ಬದಲಾವಣೆಗಳೊಂದಿಗೆ ವೈದ್ಯ ಅಂಬಟ್ಕರ್ ಅವರು ಈ ಕೆಳಗಿನವುಗಳನ್ನು ಶಿಫಾರಸು ಮಾಡುತ್ತಾರೆ:
- ಸಾಕಷ್ಟು ಪ್ರಮಾಣದಲ್ಲಿ ಮಜ್ಜಿಗೆಯ ಸೇವನೆ
- ಜಲೀಕರಣ(ಹೈಡ್ರೇಶನ್) ಮಟ್ಟವನ್ನು ಪರಿಶೀಲಿಸುತ್ತಿರುವುದು
- ಬಾಯಾರಿದಾಗ ಮಾತ್ರ ನೀರು ಕುಡಿಯುವುದು
- ಖಾಲಿ ಹೊಟ್ಟೆಯಲ್ಲಿ ಹೆಚ್ಚು ನೀರು ಕುಡಿಯದೇ ಇರುವುದು
ಎನಿಮಾ ಮತ್ತು ವಿರೇಚನ
IBS ಲಕ್ಷಣಗಳನ್ನು, ವಿಶೇಷವಾಗಿ ವ್ಯತ್ಯಯನಗೊಂಡ ಕರುಳಿನ ಚಲನೆಗಳನ್ನು ನಿಭಾಯಿಸಲು ಎನಿಮಾ ಚಿಕಿತ್ಸೆ(ಬಸ್ತಿ)ಯನ್ನು ಬಳಸಲಾಗುತ್ತದೆ. ಇದು ವೈದ್ಯಕೀಯವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ವೈದ್ಯ ಅಂಬಟ್ಕರ್ ಅವರು IBS ನಿರ್ವಹಣೆಯಲ್ಲಿ ವಿರೇಚನ ಚಿಕಿತ್ಸೆ ಕೂಡಾ ಪರಿಣಾಮಕಾರಿ ಎಂದು ಪ್ರತಿಪಾದಿಸುತ್ತಾರೆ.
ಸಣ್ಣ-ಮಟ್ಟದ ವೈದ್ಯಕೀಯ ಅಧ್ಯಯನದಲ್ಲಿ, ಸಂಶೋಧಕರು 30 ಅಭ್ಯರ್ಥಿಗಳಲ್ಲಿ ಎರಡು ರೀತಿಯ ಎನಿಮಾ (ಮಜ್ಜಿಗೆ-ಆಧಾರಿತ ಮತ್ತು ಗಿಡಮೂಲಿಕಗಳು) ಅನ್ನು ಬಳಸಿದ್ದರು. ಎರಡೂ ಚಿಕಿತ್ಸೆಗಳು ಅವುಗಳ ಲಕ್ಷಣಕ್ಕೆ ಅನುಗುಣವಾಗಿ ಸುಧಾರಣೆಯನ್ನು ತೋರಿಸಿದ್ದವು. 15 ಅಭ್ಯರ್ಥಿಗಳನ್ನು ಒಳಗೊಂಡ ಇನ್ನೊಂದು ಅಧ್ಯಯನದಲ್ಲಿ, ಎನಿಮಾ ಉತ್ತಮ ಫಲಿತಾಂಶವನ್ನು ತೋರಿಸಿದೆ.
ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಚಿಕಿತ್ಸೆಗಳೊಂದಿಗೆ, ಒತ್ತಡ ಮತ್ತು ಆತಂಕವನ್ನು ನಿಯಂತ್ರಣದಲ್ಲಿಡಬೇಕು, ಯಾಕೆಂದರೆ ಇವುಗಳೂ IBS ಲಕ್ಷಣಗಳನ್ನು ತೀವ್ರಗೊಳಿಸಬಹುದು. ಆಯುರ್ವೇದ ತಜ್ಞರು ಈ ಚಿಕಿತ್ಸೆಗಳೊಂದಿಗೆ ಆತಂಕ ಮತ್ತು ಒತ್ತಡ ನಿವಾರಣೆಗಾಗಿ ಶಿರೋಧಾರ ಎಂಬ ಚಿಕಿತ್ಸೆಯನ್ನು ನೀಡುತ್ತಾರೆ.
ಕಸ್ಟಮೈಸ್ ಮಾಡಲಾದ ಶಿಫಾರಸುಗಳು
ಆಯುರ್ವೇದ ತಜ್ಞರು ಚಿಕಿತ್ಸೆಗಳನ್ನು ಕಸ್ಟಮೈಸ್ ಮಾಡಿ ವೈಯುಕ್ತಿಕ ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ಸೂಚನೆಗಳನ್ನು ನೀಡುತ್ತಾರೆ. “ಗಿಡಮೂಲಿಕೆಗಳು, ಔಷಧಿಗಳು ಮತ್ತು ಚಿಕಿತ್ಸೆಗಳ ಆಯ್ಕೆಗಳು ಲಕ್ಷಣಗಳ ತೀವ್ರತೆ ಮತ್ತು ದೀರ್ಘಕಾಲಿಕತೆ ಹಾಗೂ ಒಳಗೊಂಡಿರುವ ದೋಷ(ವಾತ, ಪಿತ್ತ, ಕಫ)ಗಳನ್ನು ಅವಲಂಬಿಸಿ ಅದರ ಪ್ರಕಾರವಾಗಿರುತ್ತದೆ” ಎನ್ನುತ್ತಾರೆ ವೈದ್ಯ ಅಂಬಟ್ಕರ್.
ಇರಿಟೇಬಲ್ ಬವೆಲ್ ಸಿಂಡ್ರೋಮ್ ಮತ್ತು ಕರುಳು-ಸ್ನೇಹಿ ಗಿಡಮೂಲಿಕೆಗಳು
ಡಾಕ್ಟರ್ ಅಂಜಲಿ ಅವರು ಈ ಕೆಳಗಿನವುಗಳನ್ನು ಶಿಫಾರಸು ಮಾಡುತ್ತಾರೆ:
- ಲಘುವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ
- ಶೇಖರಿಸಿಟ್ಟ ಅಥವಾ ಮತ್ತೆ ಮತ್ತೆ ಬಿಸಿಮಾಡಿದ ಆಹಾರಕ್ಕೆ ಬದಲಾಗಿ ಹೊಸತಾಗಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿ
- ಹಸಿವಾದಾಗ ಮಾತ್ರ ಊಟ ಮಾಡಿ
- ಸೋರೆಕಾಯಿ ಹೀರೆಕಾಯಿ ಪಡುವಲಕಾಯಿ ಕುಂಬಳಕಾಯಿಯಂಥ ತರಕಾರಿಗಳನ್ನು ಸೇವಿಸಿ (ಹಾಗಲಕಾಯಿ ಹೊರತುಪಡಿಸಿ)
- ಹಸಿಮೆಣಸಿನ ಬದಲಾಗಿ ಕಾಳು ಮೆಣಸು ಅಥವಾ ಹಿಪ್ಪಲಿಯನ್ನು ಬಳಸಿ
- ಸಾಮಾನ್ಯ ಉಪ್ಪಿಗೆ ಬದಲಾಗಿ ಸೈಂಧವ ಲವಣ (rock salt ) ಬಳಸಿ
- ಅಡುಗೆಯಲ್ಲಿ ಜೀರಿಗೆ, ಬೆಳ್ಳುಳ್ಳಿ,ಒಣಶುಂಠಿಯನ್ನು ಬಳಸಿ (ಹಸಿವು ತುಂಬಾ ಕಡಿಮೆ ಇದ್ದರೆ)
- ಮಸಾಲೆಭರಿತ ಆಹಾರ ಸೇವನೆಯನ್ನು ಕಡಿಮೆಗೊಳಿಸಿ (2020ರ ಅಧ್ಯಯನವೊಂದು ಮಸಾಲೆಭರಿತ ಆಹಾರ ಸೇವನೆಯು ವಿಶೇಷವಾಗಿ ಮಹಿಳೆಯರಲ್ಲಿ IBS ಲಕ್ಷಣದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ದೃಢಪಡಿಸಿದೆ).
ಇರಿಟೇಬಲ್ ಬವೆಲ್ ಸಿಂಡ್ರೋಮ್ – IBS ನಿಂದ ಬಳಲುವವರಿಗೆ ಮಜ್ಜಿಗೆಯೇ ಅಮೃತ
ಆಯುರ್ವೇದ ತಜ್ಞರು ಪ್ರತಿನಿತ್ಯ ಮಜ್ಜಿಗೆಯನ್ನು ಧಾರಾಳವಾಗಿ ಸೇವಿಸಲು ಸೂಚಿಸುತ್ತಾರೆ. ಇಂಟರ್ನ್ಯಾಷನಲ್ ಆಯುರ್ವೇದಿಕ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಿಸಲಾದ ವಿಮರ್ಶಾ ಪ್ರಬಂಧವು IBS ನಿರ್ವಹಣೆಯಲ್ಲಿ ಮಜ್ಜಿಗೆಯ ಪರಿಣಾಮಕಾರಿ ಮಾರ್ಗದ ಬಗ್ಗೆ ಹೇಳುತ್ತದೆ.
“ಔಷಧೀಯ ಗುಣಗಳ ವಿಚಾರಕ್ಕೆ ಬಂದಾಗ ಹಾಲಿನ ಮೂಲ ಮತ್ತು ಮಜ್ಜಿಗೆಯನ್ನು ತಯಾರಿಸುವ ವಿಧಾನವು ಮುಖ್ಯವಾಗುತ್ತದೆ,”ಎಂದು ವೈದ್ಯ ಅಂಬಟ್ಕರ್ ಅವರು ಹೇಳುತ್ತಾರೆ.
IBS ಅನ್ನು ನಿಭಾಯಿಸಲು ಬಳಸುವ ಹೆಚ್ಚಿನ ಔಷಧಗಳಲ್ಲಿ ಮಜ್ಜಿಗೆಯನ್ನು ಪ್ರಮುಖ ಪದಾರ್ಥವಾಗಿ ಬಳಸಲಾಗುತ್ತದೆ. ಅಲ್ಲದೇ, ಎನಿಮಾ ಚಿಕಿತ್ಸೆ ಮತ್ತು ಶಿರೋಧಾರದಲ್ಲಿಯೂ ಇದನ್ನು ಬಳಸಲಾಗುತ್ತದೆ. ಒಣಶುಂಠಿ, ಬೆಳ್ಳುಳ್ಳಿ, ಜೀರಿಗೆ, ಅಜ್ವೈನ್ (ಓಂಕಾಳು) ಎಲೆಗಳು ಮುಂತಾದ ಗಿಡಮೂಲಿಕೆ ಪದಾರ್ಥಗಳನ್ನು ಮಜ್ಜಿಗೆಗೆ ಸೇರಿಸುವುದರಿಂದ IBSನಿಂದ ಬಳಲುವವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಡಾ ಅಂಜಲಿಯವರು ಹೇಳುತ್ತಾರೆ.
ಆರಂಭಿಕ ಚಿಕಿತ್ಸೆ
ವ್ಯಕ್ತಿಗೆ ಆಗಾಗ್ಗೆ ಮಲವಿಸರ್ಜನೆ ಉಂಟಾಗುವಾಗ ಮತ್ತು ದೀರ್ಘಕಾಲಿಕ ಜೀರ್ಣ ಸಮಸ್ಯೆಗಳಿದ್ದಾಗ, ಅವರು ಆದಷ್ಟು ಬೇಗನೇ ವೈದ್ಯರನ್ನು ಭೇಟಿ ಮಾಡಬೇಕು. ಆರಂಭಿಕ ಚಿಕಿತ್ಸೆಯಿಂದ IBS ಅನ್ನು ಹೆಚ್ಚು ಸುಲಭವಾಗಿ ತಡೆಗಟ್ಟಬಹುದು ಮತ್ತು ನಿಭಾಯಿಸಬಹುದು ಎನ್ನುತ್ತಾರೆ ವೈದ್ಯ ಅಂಬಟ್ಕರ್.