ಹೆಚ್ಚಿನ ಮನೆಗಳಲ್ಲಿ ಮುಂಜಾನೆಯ ಸಮಯ ಬಹಳ ಗಡಿಬಿಡಿಯಿಂದ ಕೂಡಿರುತ್ತದೆ. ಅಲಾರಾಂ ಹಲವಾರು ಬಾರಿ ಹೊಡೆದುಕೊಂಡ ನಂತರ ಕೆಲಸಕ್ಕೆ ಹೊರಡಲು ಎದ್ದೇಳುವುದು, ಆ ಬಳಿಕ ಯಾವತ್ತೂ ಮುಗಿಯದ ರಸ್ತೆ ದಟ್ಟಣೆಯ ನಡುವೆ ಕಚೇರಿಗೆ ಪ್ರಯಾಣಿಸುವ ಜಂಜಾಟದಲ್ಲಿ, ಆರೋಗ್ಯಕರ ಉಪಾಹಾರ ಎಂಬುದು ವ್ಯಕ್ತಿಯ ಮನಸ್ಸಿನಲ್ಲಿ ಕೊನೆಯಲ್ಲಿ ನೆನಪಾಗುವ ವಿಷಯವಾಗಿರುತ್ತದೆ. ಜೀವನದ ಜಂಜಾಟದ ನಡುವೆ ಬೆಳಗ್ಗಿನ ಉಪಾಹಾರವನ್ನು ಮಾಡದೆ ಇರುವುದು ಸಾಮಾನ್ಯ ಸಂಗತಿ ಎನಿಸಿ ಬಿಟ್ಟಿದೆ. ಆದರೆ, ಯಾವಾಗಲೂ ಹೀಗೆಯೇ ಉಪಾಹಾರವನ್ನು ಬಿಡುತ್ತಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ ಎನ್ನುತ್ತಾರೆ ತಜ್ಞರು.
ಬೆಳಗ್ಗಿನ ಉಪಾಹಾರವನ್ನು ಸಾಮಾನ್ಯವಾಗಿ ದಿನದ ಪ್ರಮುಖ ಆಹಾರವೆಂದು ಪರಿಗಣಿಸಲಾಗುತ್ತದೆ, ಅದನ್ನು ತಿನ್ನದೇ ಇರುವುದು ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ.
ಬೆಳಗ್ಗಿನ ಉಪಾಹಾರ ಏಕೆ ಆವಶ್ಯಕ?
“ಬೆಳಗ್ಗಿನ ಉಪಾಹಾರ ಸೇವನೆಯು, ನಮ್ಮ ಶರೀರದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ, ಶರೀರಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮಾತ್ರವಲ್ಲ, ಬೆಳಗ್ಗಿನ ಉಪಾಹಾರವು ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದು ಕಡಿಮೆ–ಸಾಂದ್ರತೆಯ ಲಿಪೊಪ್ರೋಟೀನ್ [LDL] ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವ ಮಧುಮೇಹ ಮತ್ತು ಹೃದಯ ಸಮಸ್ಯೆಗಳ ಸಂಭವವನ್ನು ಕಡಿಮೆ ಮಾಡುತ್ತದೆ ಮತ್ತು ಶರೀರದ ತೂಕವನ್ನು ಕಾಪಾಡಲು ಸಹಾಯಕ. ಸ್ನಾಯು ಮತ್ತು ಮೆದುಳಿನ ಕಾರ್ಯಚಟುವಟಿಕೆಗೆ ಅಗತ್ಯವಾದ ರಕ್ತದಲ್ಲಿನ ಸಕ್ಕರೆಯನ್ನು ಬೆಳಗ್ಗಿನ ಉಪಾಹಾರ ಪುನಃ ತುಂಬಿಸುತ್ತದೆ” ಎಂದು ಹೈದರಾಬಾದ್ನ ನ್ಯೂಟ್ರಿಕ್ಲಿನಿಕ್ನ ಸಂಸ್ಥಾಪಕಿ ಮತ್ತು ಸಮಾಲೋಚಕ ಆಹಾರತಜ್ಞರಾದ ದೀಪಾ ಅಗರ್ವಾಲ್ ಹೇಳುತ್ತಾರೆ.
“ಬೆಳಗ್ಗಿನ ಉಪಾಹಾರವು ದೇಹವನ್ನು ಕಿಕ್ಸ್ಟಾರ್ಟ್ ಮಾಡಲು ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಾಹಾರವನ್ನು ಸೇವಿಸದೇ ಇರುವುದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಶರೀರದ ತೂಕ ಹೆಚ್ಚಾದಾಗ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳು ಸಹ ಹೆಚ್ಚಾಗುತ್ತವೆ, ಇದು ಅಪಧಮನಿಗಳ ಅಡಚಣೆಯನ್ನು ಉಂಟುಮಾಡುತ್ತದೆ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಆಹಾರತಜ್ಞೆ, ಹೈದರಾಬಾದಿನ ಆಹಾರ ವಿಜ್ಞಾನಿ ಮತ್ತು ಹಿರಿಯ ಪೌಷ್ಟಿಕಾಂಶ ಸಮಾಲೋಚಕರಾದ ಜ್ಯೋತಿ ಛಾಬ್ರಿಯಾ ಹೇಳುತ್ತಾರೆ.
ಉಪಾಹಾರ ತಪ್ಪಿಸುವುದರಿಂದ ಆಗಬಹುದಾದ ಅಪಾಯಗಳು
2019 ರಲ್ಲಿ US ನಲ್ಲಿ ಮೂರನೇ ನ್ಯಾಶನಲ್ ಹೆಲ್ತ್ ಆಂಡ್ ನ್ಯೂಟ್ರಿಶನ್ ಎಕ್ಸಾಮಿನೇಶನ್ ಸರ್ವೇಯ (NHANES III) ಭಾಗವಾಗಿ ಸುಮಾರು 6,550 ವಯಸ್ಕರನ್ನು ಮೌಲ್ಯಮಾಪನ ಮಾಡಿದ ಒಂದು ಅಧ್ಯಯನದ ಬಗ್ಗೆ, ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ಒಂದು ಲೇಖನವು, ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವ ಜನರು ಅಥೆರೋಸ್ಲ್ಕಿರೋಸಿಸ್ (ಅಪಧಮನಿ ಪೆಡಸಾಗುವುದು) ಬೆಳವಣಿಗೆಯ ಸಾಧ್ಯತೆಯನ್ನು ಹೊಂದಿರುವುದನ್ನು ಮತ್ತು ಹೃದಯಾಘಾತ ಅಥವಾ ಸ್ಟ್ರೋಕ್ನಿಂದ ಸಾಯುತ್ತಿರುವ ಅಂಶವನ್ನು ಒತ್ತಿಹೇಳುತ್ತದೆ.
“ದೀರ್ಘಕಾಲದಿಂದ ಒಂದು ಆಹಾರ ಪದ್ಧತಿಗೆ ಹೊಂದಿಕೊಂಡಿರುವ ಜನರು ಉಪಾಹಾರವನ್ನು ಮಾಡದೇ ಇರುವುದರಿಂದ, ತೀವ್ರ ಹಸಿವಿಗೆ ಒಳಗಾಗುತ್ತಾರೆ, ಹಸಿವು ನೀಗಿಸಲು ನಂತರ ಹೆಚ್ಚಿನ ಕ್ಯಾಲೋರಿಯುಳ್ಳ ಆಹಾರಗಳನ್ನು ಅತಿಯಾಗಿ ತಿನ್ನುತ್ತಾರೆ. ಇದರಿಂದ ದೇಹದ ತೂಕ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಅಪಾಯಕಾರಿ ಅಂಶ” ಎಂದು ಅಮೇರಿಕದ ಅರ್ಬಾನಾದ OSF ಹೆಲ್ತ್ಕೇರ್ ಕಾರ್ಡಿಯೋವಾಸ್ಕುಲರ್ ಇನ್ಸ್ಟಿಟ್ಯೂಟ್ನ ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ ಅಲಾ ಉಜಯ್ಲಿ ಹೇಳುತ್ತಾರೆ.
“ಬೆಳಗ್ಗಿನ ಉಪಾಹಾರವನ್ನು ಬಿಟ್ಟು ಬಿಡುವುದು ಒಂದು ಕೆಟ್ಟ ಆಹಾರ ಪದ್ಧತಿ. ಬೆಳಗ್ಗಿನ ಉಪಾಹಾರವನ್ನು ಬಿಟ್ಟು ಬಿಡುವ ಜನರು ಕಡಿಮೆ ದೈಹಿಕ ಚಟುವಟಿಕೆ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ, ಅನಿಯಮಿತ ಸಮಯದಲ್ಲಿ ರಾತ್ರಿಯ ಊಟವನ್ನು ಮಾಡುತ್ತಾರೆ, ಆಗಾಗ್ಗೆ ಲಘು ಆಹಾರ ಮತ್ತು ಅನಾರೋಗ್ಯಕರ ಸಂಸ್ಕರಿಸಿದ ಆಹಾರ ಮತ್ತು ಕೆಂಪು ಮಾಂಸವನ್ನು ತಿನ್ನುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ” ಎಂದು ಇಲಿನಾಯ್ಸ್ ಮೂಲದ ಕಾರ್ಡಿಯಾಕ್ ನರ್ಸ್ ಪ್ರಾಕ್ಟೀಷನರ್ ಅಂಬರ್ ಕಿಂಗ್ರಿ ಅವರು ಒತ್ತಿಹೇಳುತ್ತಾರೆ.
ಊಟವನ್ನು ಮಾಡದಿರುವುದು ಮತ್ತು ಮಧ್ಯಂತರ ಉಪವಾಸ
ಜರ್ನಲ್ ಆಫ್ ದಿ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಬೆಳಗ್ಗಿನ ಉಪಾಹಾರವನ್ನು ಮಾಡದೇ ಇರುವುದಕ್ಕೂ, ಹೃದಯರಕ್ತನಾಳದ ತೊಂದರೆಗಳ ಕಾರಣದ ಸಾವಿನ ಅಪಾಯಕ್ಕೂ ಸಂಬಂಧವಿದೆ ಎಂದು ಹೇಳುತ್ತದೆ. ಈ ಅಧ್ಯಯನವು ಊಟ ಮಾಡದಿರುವ ಬಗ್ಗೆ ಆಗಿತ್ತೇ ಹೊರತು ಮಧ್ಯಂತರ ಉಪವಾಸದ ಕುರಿತಾಗಿರಲಿಲ್ಲ ಎಂದು ಹ್ಯಾಪಿಯೆಸ್ಟ್ ಹೆಲ್ತ್ನೊಂದಿಗಿನ ಇ–ಮೇಲ್ ಸಂವಾದದಲ್ಲಿ, ಯುಎಸ್ ಮೂಲದ, ಈ ಅಧ್ಯಯನದ ಪ್ರಮುಖ ಲೇಖಕ ಡಾ ಯಾಂಗ್ಬೋ ಸನ್ ಹೇಳಿದರು.
ಇನ್ನಷ್ಟು ಸ್ಪಷ್ಟಪಡಿಸುತ್ತಾ, “ಊಟವನ್ನು ಮಾಡದಿರುವುದು ಮತ್ತು ಮಧ್ಯಂತರ ಉಪವಾಸ ಎರಡು ವಿಭಿನ್ನ ಪರಿಕಲ್ಪನೆಗಳು. ಮಧ್ಯಂತರ–ಉಪವಾಸವು ಸಮಯ–ನಿರ್ಬಂಧಿತ ಆಹಾರ ವಿಧಾನವಾಗಿದೆ, ಇದು ಎಲ್ಲಾ ಆಹಾರಗಳು ಮತ್ತು ಕ್ಯಾಲೋರಿ–ಒಳಗೊಂಡಿರುವ ಪಾನೀಯಗಳ ಸೇವನೆಯನ್ನು ದಿನಕ್ಕೆ ಒಂದು ಸೆಟ್ ಅವಧಿಗೆ [ಉದಾಹರಣೆಗೆ, ಎಂಟು ಗಂಟೆಗಳು] ಸೀಮಿತಗೊಳಿಸುತ್ತದೆ. ಆದರೆ, ನಮ್ಮ ಅಧ್ಯಯನ ವರದಿಯು ಊಟವನ್ನು ಸೇವಿಸದಿರುವ ಬಗ್ಗೆ ಇದೆ. ಇದರಲ್ಲಿ ಭಾಗವಹಿಸುವವರು ‘ಊಟ‘ವನ್ನು ಮಾಡದಿರುವವರು, ಅಂದರೆ ಅವರು ನಿರ್ದಿಷ್ಟ ಅಥವಾ ಕೆಲವು ಊಟವನ್ನು ಬಿಟ್ಟಿರಬಹುದು, ಆದರೆ ಅದೇ ಸಮಯದಲ್ಲಿ ತಿಂಡಿಗಳನ್ನು ಸೇವಿಸಿರಬಹುದು. ಹೀಗಾಗಿ, ನಮ್ಮ ಅಧ್ಯಯನವನ್ನು ಮಧ್ಯಂತರ ಉಪವಾಸದೊಂದಿಗೆ ನೇರವಾಗಿ ಹೋಲಿಸಲಾಗುವುದಿಲ್ಲ” ಎಂದು ಅವರು ಹೇಳುತ್ತಾರೆ.
ಮಧ್ಯಂತರ ಉಪವಾಸವು ದೇಹವನ್ನು ನಿರ್ವಿಷಗೊಳಿಸಲು ಉತ್ತಮವಾಗಿದೆ, ಉತ್ತಮ ಆರೋಗ್ಯಕ್ಕಾಗಿ ದಿನವಿಡೀ ಆಹಾರವನ್ನು ಆರು ಸಣ್ಣ ಭಾಗಗಳನ್ನಾಗಿ ವಿಂಗಡಿಸಿ ಸೇವಿಸಬೇಕೆಂದು ವೈಯಕ್ತಿಕವಾಗಿ ಛಾಬ್ರಿಯಾ ಶಿಫಾರಸು ಮಾಡುತ್ತಾರೆ.
ಮಧುಮೇಹ ಅಥವಾ ಹೃದಯ ಸಮಸ್ಯೆಗಳಂತಹ ಸಹ–ರೋಗಪರಿಸ್ಥಿತಿಯನ್ನು ಹೊಂದಿರುವ ಜನರು ತಮ್ಮ ಕ್ಯಾಲೊರಿ ಸೇವನೆಯನ್ನು ಹೊಂದಿಸಿಕೊಳ್ಳಬೇಕು ಎಂದು ಡಾ ಉಜಯ್ಲಿ ಹೇಳುತ್ತಾರೆ. “ಇತರ ಆರೋಗ್ಯವಂತ ಜನರು, ತಮ್ಮ ದೇಹದ ಅನಿಸಿಕೆಯನ್ನು ಆಲಿಸಬೇಕು. ನಿಮಗೆ 9 ಗಂಟೆಗೆ ಹಸಿವಾಗುವುದಾದರೆ, ಬೆಳಿಗ್ಗೆ 7 ಗಂಟೆಗೆ ಹಸಿವನ್ನು ನೀಗಿಸಿಕೊಳ್ಳುವುದು ಉತ್ತಮ, ಅಂದರೆ ನಿಮ್ಮ ಮೆದುಳು ನಿಮ್ಮನ್ನು ಅತಿ–ಕ್ಯಾಲೊರಿಯುಕ್ತ ಕೆಟ್ಟ ಆಹಾರ ಸೇವಿಸುವಂತೆ ಪ್ರಚೋದಿಸುವ ನೀವು ಹಸಿವನ್ನು ನೀಗಿಸಿಕೊಳ್ಳುವುದು ಉತ್ತಮ” ಎಂದು ಅವರು ಹೇಳುತ್ತಾರೆ.
ಹೃದಯ ಸ್ನೇಹಿ–ಆರೋಗ್ಯಕರ ಉಪಾಹಾರ
ದಿನದ ಆರಂಭದಲ್ಲಿ, ಪೋಷಕಾಂಶಗಳಿಂದ ತುಂಬಿದ, ಹೃದಯಕ್ಕೆ ಶಕ್ತಿ ನೀಡುವ–ಆರೋಗ್ಯಕರ ಉಪಾಹಾರವನ್ನು ಸೇವಿಸುವುದು ನಿಮ್ಮ ಹೃದಯವನ್ನು ಉತ್ತೇಜಿಸಲು ಉತ್ತಮ ವಿಧಾನವಾಗಿದೆ ಎಂದು ಡಾ ಅಗರ್ವಾಲ್ ಹೇಳುತ್ತಾರೆ. ಐದು ಆಹಾರ ಗುಂಪುಗಳಲ್ಲಿ (ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ ಆಹಾರಗಳು ಮತ್ತು ಹಾಲಿನ ಉತ್ಪನ್ನಗಳು) ಸಂಪೂರ್ಣ ಮತ್ತು ಸಂಸ್ಕರಿಸದ ಆಹಾರವನ್ನು ಆಯ್ಕೆ ಮಾಡಲು ಅವರು ಸಲಹೆ ನೀಡುತ್ತಾರೆ:
- ಮೊಟ್ಟೆಗಳು ವಿವಿಧ ಹಾಲಿನ ಉತ್ಪನ್ನಗಳು ಮತ್ತು ಪ್ರೋಟೀನ್ಯುಕ್ತ ದ್ವಿದಳ ಧಾನ್ಯಗಳು
- ಆರೋಗ್ಯಕರ ಕೊಬ್ಬಿಗಾಗಿ ಬೀಜಗಳು, ಆಲಿವ್ ಎಣ್ಣೆ ಮತ್ತು ಬೆಣ್ಣೆಹಣ್ಣು
- ನಾರಿನಂಶ ಮತ್ತು ಕಾರ್ಬೋಹೈಡ್ರೇಟ್ಗಳಿಗೆ ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳು
ಹೃದಯ ಸ್ನೇಹಿ–ಆರೋಗ್ಯಕರ ಉಪಾಹಾರವನ್ನು ಸಿದ್ಧಪಡಿಸಲು ಸಮಯ ಸಿಗದವರು, ತಮ್ಮ ಚಯಾಪಚಯ ಕ್ರಿಯೆಯನ್ನು ಕಿಕ್ಸ್ಟಾರ್ಟ್ ಮಾಡಲು ಬೀಜಗಳು ಅಥವಾ ಹಣ್ಣುಗಳಂತಹ ಇತರ ಪರ್ಯಾಯ ವಿಧಾನಗಳನ್ನು ಬಳಸಬಹುದು ಎಂದು ಚಾಬ್ರಿಯಾ ಹೇಳುತ್ತಾರೆ. “ಬೆಳಗ್ಗಿನ ಉಪಾಹಾರವನ್ನು ರಾಜನಂತೆ ತಿನ್ನಿರಿ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಸೇವಿಸಿ ಮತ್ತು ರಾತ್ರಿಯ ಊಟವನ್ನು ಬಡವನಂತೆ ಸೇವಿಸಿ, ಆದರೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಹೋಗದಿರಿ” ಎಂದು ಅವರು ಸೂಚಿಸುತ್ತಾರೆ.
ಸಾರಾಂಶ
- ಬೆಳಗ್ಗಿನ ಉಪಾಹಾರವನ್ನು ಸೇವಿಸದೇ ಇರುವುದರಿಂದ ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
- ಬೆಳಗ್ಗಿನ ಉಪಾಹಾರವನ್ನು ಮಾಡದಿರುವುದರಿಂದ ಬೊಜ್ಜು, ಕೊಲೆಸ್ಟ್ರಾಲ್ ಮಟ್ಟದ ಹೆಚ್ಚಳ, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇವು ಹೃದಯಕ್ಕೆ ಅಪಾಯಕಾರಿ ಅಂಶಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.
- ದಿನದ ಪ್ರಾರಂಭದಲ್ಲಿ ಹೃದಯಕ್ಕೆ–ಆರೋಗ್ಯಕರವಾದ ಉಪಾಹಾರವನ್ನು ಸೇವಿಸುವುದು ನಿಮ್ಮ ಹೃದಯವನ್ನು ಉತ್ತೇಜಿಸುವ ಅತ್ಯುತ್ತಮ ವಿಧಾನ.