ಬೆಂಗಳೂರಿನ 22 ವರ್ಷದ ಪದವೀಧರೆ ಶ್ರೀಜಾ ಬಸು ಅವರು ಅಡುಗೆಮನೆಯ ನೆಲದ ಮೇಲೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಬಿದ್ದು ಹೋದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ 104 ಡಿಗ್ರಿ ಜ್ವರವಿತ್ತು. ಅವರ ಮಂಕಾದ ಮುಖವು ಅವರು ನಿರ್ಜಲೀಕರಣಗೊಂಡಿರುವುದನ್ನು ಸೂಚಿಸುತ್ತಿತ್ತು. ಅವರಿಗೆ ತಕ್ಷಣವೇ IV (ಇಂಟ್ರಾವೆನಸ್ ಫ್ಲೂಯಿಡ್) ಡ್ರಿಪ್ಸ್ ಹಾಕಲಾಯಿತು. ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಯಿತು. ಇದರಿಂದ ಅವರಿಗೆ ಮೇಲ್ಭಾಗದ ಮೂತ್ರನಾಳ ಮತ್ತು ಮೂತ್ರಪಿಂಡದ ಸೋಂಕಿದೆ ಎಂದು ತಿಳಿದುಬಂದಿತು.
“ನನ್ನ ಸೆಮಿಸ್ಟರ್ ಪರೀಕ್ಷೆಯಲ್ಲಿ ನಾನು ನೀರು ಮತ್ತು ಆಹಾರ ಸೇವನೆ ಎರಡರಲ್ಲೂ ರಾಜಿ ಮಾಡಿಕೊಂಡಿದ್ದೆ. ನಾನು ದೌರ್ಬಲ್ಯ ಮತ್ತು ಆಜೀರ್ಣದ ತೊಂದರೆಯ ಆರಂಭಿಕ ಲಕ್ಷಣಗಳನ್ನು ಸಹ ನಿರ್ಲಕ್ಷಿಸಿದೆ, ಅದರಿಂದ ನನ್ನ ಸ್ಥಿತಿ ಮತ್ತಷ್ಟು ಉಲ್ಬಣಿಸಿತು, ”ಎಂದು ಚೇತರಿಸಿಕೊಂಡ ಎರಡು ವಾರಗಳ ನಂತರ ಬಸು ಅವರು ನೆನಪಿಸಿಕೊಳ್ಳುತ್ತಾರೆ.
ಆದರೂ, ಊಹೆಗೂ ಮೀರಿದಷ್ಟು ಸುಲಭವಾಗಿ ನಮ್ಮ ಮೂತ್ರಪಿಂಡಗಳ ಕಾಳಜಿವಹಿಸಬಹುದಾಗಿದೆ. ಎಲ್ಲಿಯವರೆಗೆ ನಾವು ಸಾಕಷ್ಟು ನೀರು ಕುಡಿಯುತ್ತೇವೆ, ಆರೋಗ್ಯಕರ ಆಹಾರ ಸೇವಿಸುತ್ತೇವೆ ಮತ್ತು ಅಲ್ಪ ಸ್ವಲ್ಪವಾದರೂ ಕ್ರಿಯಾಶೀಲರಾಗಿರುತ್ತೇವೆ ಅಲ್ಲಿವರೆಗೆ ನಮ್ಮ ಮೂತ್ರಪಿಂಡಗಳು ಚೆನ್ನಾಗಿ ಕೆಲಸ ಮಾಡುತ್ತವೆ. “ಸಮಯಕ್ಕೆ ಸರಿಯಾಗಿ ತಿನ್ನುವುದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಸಾಕಷ್ಟು ದ್ರವ ಪದಾರ್ಥಗಳ ಸೇವನೆ ನನ್ನ ಕಳೆದುಹೋದ ಶಕ್ತಿ ಮತ್ತು ಬಲವನ್ನು ಮರಳಿ ಪಡೆಯಲು ಸಹಾಯ ಮಾಡಿತು” ಎಂದು ಬಸು ಹೇಳುತ್ತಾರೆ.
ನಮ್ಮ ದೇಹದಿಂದ ವಿಷಯುಕ್ತ ವಸ್ತುಗಳನ್ನು ಫಿಲ್ಟರ್ ಮಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ಅನಗತ್ಯ ಪದಾರ್ಥಗಳನ್ನು ತೆಗೆದುಹಾಕುವುದು ಮತ್ತು ಪ್ರಮುಖವಾದವುಗಳನ್ನು ಪುನಃ ಹೀರಿಕೊಳ್ಳುವ ಮೂಲಕ, ಅವು ಹೋಮಿಯೋಸ್ಟಾಸಿಸ್ (ನಮ್ಮ ದೇಹದಲ್ಲಿನ ಒಟ್ಟು ದ್ರವದ ಸಮತೋಲನ) ವನ್ನು ಕಾಯ್ದುಕೊಳ್ಳುತವೆ. ನಮ್ಮನ್ನು ಜೀವಂತವಾಗಿಡುವಲ್ಲಿ ಈ ಪ್ರಕ್ರಿಯೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದರೂ, ನಮ್ಮ ಜೀವನಶೈಲಿಯ ಆಯ್ಕೆಗಳು ಮೂತ್ರಪಿಂಡಗಳ ಸೂಕ್ಷ್ಮ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಬಹುದಾಗಿದೆ.
ನಿಮ್ಮ ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಬೀರುವ ಜೀವನಶೈಲಿಯ ಅಂಶಗಳು
ಪರಿಣಿತರಿಂದ ಪರಿಶೀಲಿಸಲಾದ ಜರ್ನಲ್, ಫ್ರಾಂಟಿಯರ್ಸ್ ಇನ್ ಜೆನೆಟಿಕ್ಸ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಆನುವಂಶಿಕ ಪ್ರವೃತ್ತಿಯು ನಮ್ಮ ಮೂತ್ರಪಿಂಡದ ಕಾಯಿಲೆಯನ್ನು ಶೇಕಡಾ 30 ರಿಂದ 70 ರಷ್ಟು ಹೆಚ್ಚಿಸುವ ಅಪಾಯವವಿದೆ. ಇಷ್ಟೇ ಅಲ್ಲದೆ, ಮಹಾರಾಷ್ಟ್ರದ ಪುಣೆಯ ಆದಿತ್ಯ ಬಿರ್ಲಾ ಸ್ಮಾರಕ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ವೈಶಾಲಿ ಮರಾಠೆ ಹೀಗೆ ಹೇಳುತ್ತಾರೆ, “ಅನಿಯಮಿತ ನಿದ್ರೆ, ಅನಿಯಮಿತ ಆಹಾರ ಸೇವನೆ, ವ್ಯಾಯಾಮದ ಕೊರತೆ, ಸಿದ್ಧ, ಪ್ಯಾಕ್ ಮಾಡಿದ ಮತ್ತು ಮಾಂಸಾಹಾರಿ ಆಹಾರಗಳ ಅತಿಯಾದ ಸೇವನೆ ಮತ್ತು ನಮ್ಮ ದೈನಂದಿನ ಆಹಾರದಲ್ಲಿ ಉಪ್ಪಿನ ಅತಿಯಾದ ಸೇವನೆಯಂತಹ ಸ್ಥಿತಿಗಳು ಮೂತ್ರಪಿಂಡದ ಕಾಯಿಲೆಗಳು ಬಹುಬೇಗ ಕಾಣಿಸಿಕೊಳ್ಳುವಂತೆ ಮಾಡಬಹುದು.
ಆರೋಗ್ಯಕ್ಕೆ ಹಾನಿಯುಂಟು ಮಾಡುವಂತಹ ಜೀವನಶೈಲಿ ಅಂಶಗಳ ಬಗ್ಗೆ ಚರ್ಚಿಸುವಾಗ, ಸಂಶೋಧನಾ ಸಲಹೆಗಾರರು, ಜೀವನಶೈಲಿ ಔಷಧ ತರಬೇತುದಾರರು ಹಾಗೂ ಅಪೋಲೋ ಆಸ್ಪತ್ರೆಗಳ ಮುದ್ರಣ ಮಾಧ್ಯಮದ ಅಂಕಣಕಾರರೂ ಆಗಿರುವ ಡಾ ಪ್ರಿಯಾಂಕಾ ರೋಹ್ಟಗಿ, ನಮ್ಮ ದೇಹದ ಸಿರ್ಕಾಡಿಯನ್ ಲಯದೊಂದಿಗೆ ಹೊಂದಿಕೊಳ್ಳುವುದರ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳುತ್ತಾರೆ. ನಿದ್ರೆಯ ವಿಷಯದಲ್ಲಿ (ಗುಣಮಟ್ಟ ಮತ್ತು ಪ್ರಮಾಣ ಎರಡೂ) ಸಿರ್ಕಾಡಿಯನ್ ಲಯದಿಂದ ವಿಚಲನಗೊಳ್ಳುವುದು , ದೇಹಕ್ಕೆ ಸಾಕಷ್ಟು ನೀರಿನ ಪೂರೈಕೆಯಾಗದಿರುವುದು, ಸಿಗರೇಟ್ ಮತ್ತು ಆಲ್ಕೋಹಾಲ್ ಗೆ ಶರಣಾಗುವುದು ಮತ್ತು ಅತಿಯಾದ ಒತ್ತಡ – ಇವೆಲ್ಲವೂ ಉರಿಯೂತಕ್ಕೆ ಕಾರಣವಾಗುತ್ತವೆ ಮತ್ತು ಇದರಿಂದ ಮೂತ್ರಪಿಂಡಗಳ ಮೇಲೆ ಹೆಚ್ಚಿನ ಹೊರೆ ಉಂಟಾಗುತ್ತದೆ ಎಂದು ಅವರು ಹೇಳುತ್ತಾರೆ.
ಹೃದಯ ಮತ್ತು ಮೂತ್ರಪಿಂಡಗಳ ಸಂಬಂಧ
ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಮತ್ತು ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳು ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು.
ನಮ್ಮ ಹೃದಯದ ಆರೋಗ್ಯ ಮತ್ತು ವಿಷಯುಕ್ತ ವಸ್ತುಗಳನ್ನು ಫಿಲ್ಟರ್ ಮಾಡುವ ನಮ್ಮ ಮೂತ್ರಪಿಂಡಗಳ ಸಾಮರ್ಥ್ಯದ ಮಧ್ಯೆ ನಿಕಟ ಸಂಬಂಧವಿದೆ. ಮೂತ್ರಪಿಂಡಗಳ ಅಸಮರ್ಪಕವಾಗಿ ಕಾರ್ಯನಿರ್ವಹಣೆಯ ಪರಿಣಾಮವಾಗಿ, ನಮ್ಮ ರಕ್ತದಲ್ಲಿ ನೀರು ಮತ್ತು ಅನಗತ್ಯ ಖನಿಜಗಳು ಶುದ್ಧೀಕರಣಗೊಳ್ಳದೆ ಹಾಗೆ ಉಳಿದುಬಿಡುತ್ತವೆ ಮತ್ತು ಶುದ್ಧೀಕರಣಗೊಳ್ಳದ ರಕ್ತ ಹೃದಯಕ್ಕೆ ಹಿಂತಿರುಗುತ್ತದೆ.
ಹೃದಯವು ಮೂತ್ರಪಿಂಡಗಳಿಗೆ ಹೇಗೆ ಸಂಪರ್ಕ ಹೊಂದಿದೆ ಎಂಬುದರ ಕುರಿತ ಚರ್ಚೆಯಲ್ಲಿ, ಡಾ ರೋಹ್ಟಗಿ ಹೇಳುತ್ತಾರೆ, “ಹೃದಯವು ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡದಿದ್ದಾಗ ರಕ್ತ ದಪ್ಪಗಾಗುತ್ತದೆ, ಇದು ಹೃದಯದಲ್ಲಿನ ಮುಖ್ಯ ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಈ ಮುಖ್ಯ ರಕ್ತನಾಳಗಳು ಮೂತ್ರಪಿಂಡಗಳಿಗೆ ಸಂಪರ್ಕ ಹೊಂದಿದ್ದು ಮೂತ್ರಪಿಂಡದಲ್ಲಿ ಕೂಡ ರಕ್ತದ ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ.
“ಕಿಡ್ನಿಗಳು ರಕ್ತದಿಂದ ನೀರು ಮತ್ತು ಉಪ್ಪನ್ನು ತೆಗೆದುಹಾಕುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂದು ಕೂಡ ಮರಾಠೆ ಹೇಳುತ್ತಾರೆ. ರಕ್ತದಲ್ಲಿ ಸೋಡಿಯಂ–ಪೊಟ್ಯಾಸಿಯಮ್ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ರೆನಿನ್ ಹಾರ್ಮೋನ್ ಅನ್ನು ಸಹ ಅವು ಉತ್ಪಾದಿಸುತ್ತವೆ. ಇಷ್ಟೇ ಅಲ್ಲದೆ, ರಕ್ತದ ಪರಿಮಾಣವನ್ನು ನಿಯಂತ್ರಿಸುವ ಮೂಲಕ ಹೃದಯವು ಒಟ್ಟಾರೆ ಪಂಪ್ ಮಾಡುವ ರಕ್ತ ಮತ್ತು ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ” ಎಂದು ಅವರು ಹೇಳುತ್ತಾರೆ.
ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ರಕ್ತದಲ್ಲಿನ ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆಯ ಮಟ್ಟವನ್ನು, ಅನಿಯಂತ್ರಿತವಾಗಿ ಬಿಟ್ಟರೆ, ಮೂತ್ರಪಿಂಡಗಳು ಸೇರಿದಂತೆ ದೇಹದಾದ್ಯಂತ ಸಣ್ಣ ರಕ್ತನಾಳಗಳನ್ನು ಅವು ನಿಷ್ಪ್ರಯೋಜಕವಾಗುವಂತೆ ಗಾಯಗೊಳಿಸುತ್ತವೆ.
ನಿಮ್ಮ ಮೂತ್ರಪಿಂಡಗಳಿಗೆ ಸಹಕಾರಿಯಾದ ಆಹಾರಗಳು
ನಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡುವಲ್ಲಿ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಪರಿಣಿತರು ಸಮೀಕ್ಷೆ ಮಾಡಿದಂತಹ ಜರ್ನಲ್, ನ್ಯೂಟ್ರಿಯೆಂಟ್ಸ್ ನಲ್ಲಿ ಪ್ರಕಟವಾದ 2021 study, ಸಾಕಷ್ಟು ಪ್ರಮಾಣದಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ತೆಗೆದುಕೊಳ್ಳದಿರುವುದು ಹಾಗೂ ಅತಿ ಹೆಚ್ಚು ಸೂಕ್ಷ್ಮ ಪೋಷಕಾಂಶಗಳನ್ನು ಸೇವನೆ ಎರಡೂ ಮೂತ್ರಪಿಂಡದ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ಸೂಚಿಸಿದೆ. ಆದ್ದರಿಂದ, ಮೂತ್ರಪಿಂಡಗಳ ಸೂಕ್ಷ್ಮವಾದ ಕಾರ್ಯನಿರ್ವಹಣೆಯನ್ನು ಸಂರಕ್ಷಿಸಲು ಆಹಾರದ ವಿಧಾನಗಳ ಮೂಲಕ ಎಲ್ಲಾ ಸೂಕ್ಷ್ಮ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.
ನಮ್ಮ ಕರುಳಿನ ಮೈಕ್ರೋಬಯೋಟಾ (ಸೂಕ್ಷ್ಮಜೀವಿಗಳು) ಕೂಡಾ ಮೂತ್ರಪಿಂಡಗಳನ್ನು ಸೋಂಕು ಮತ್ತು ಹಾನಿಯಿಂದ ರಕ್ಷಿಸುತ್ತದೆ, ಅದನ್ನು ಬದಲಾಯಿಸಿದಾಗ ಮೂತ್ರಪಿಂಡದ ಕಾಯಿಲೆಗಳು ಮತ್ತು ಸೋಂಕಿಗೆ ಕಾರಣವಾಗಬಹುದು. “ಅತಿಯಾಗಿ –ಸಂಸ್ಕರಿಸಿದ ಆಹಾರಗಳು ಕರುಳಿನ ಸೂಕ್ಷ್ಮಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ, ಇದು ನಮ್ಮ ಜೀರ್ಣಕ್ರಿಯೆಯ ಪದ್ಧತಿಯ ಮೇಲೆ ಪರಿಣಾಮ ಬೀರುತ್ತದೆ, ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ” ಎಂದು ಡಾ ರೋಹ್ಟಗಿ ಹೇಳುತ್ತಾರೆ.
ಕರುಳಿನ ಸೂಕ್ಷ್ಮಜೀವಿಗಳ ಪ್ರಾಮುಖ್ಯತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಒದಗಿಸುವ ಆಹಾರದ ಭಾಗದ ಗಾತ್ರಗಳಲ್ಲಿ, ವಿಶೇಷವಾಗಿ ಪ್ರೋಟೀನ್ ಗಳಲ್ಲಿ ಬದಲಾವಣೆಗಳನ್ನು ಮಾಡಬಾರದು ಎಂದು ಅವರು ಹೇಳುತ್ತಾರೆ.
ಮೂತ್ರಪಿಂಡದ ಕಾಯಿಲೆಗಳಿರುವ ಜನರು ಪ್ರೋಟೀನ್ ಗಳನ್ನು ಸೇವಿಸುವುದರ ಪರಿಣಾಮವನ್ನು ಚರ್ಚಿಸುತ್ತಾ, “ಒಟ್ಟು ಕ್ಯಾಲೊರಿಗಳಲ್ಲಿ 10-15 ಪ್ರತಿಶತದಷ್ಟು ಪಾಲು ಪ್ರೋಟೀನ್ ಇರಬೇಕು, ವಿಶೇಷವಾಗಿ ಪ್ರಾಣಿ ಜನ್ಯ ಪ್ರೋಟೀನ್ ಗಳಿಂದ ಇದನ್ನು ಪೂರೈಸಬಹುದು, ಸೋಯಾ ತುಂಡುಗಳು, ಬೇಳೆಕಾಳುಗಳು ಮತ್ತು ರಾಗಿ ಸಸ್ಯಾಹಾರಿಗಳಿಗೆ ಉತ್ತಮ ಪ್ರೋಟೀನ್ ಮೂಲವಾಗಿವೆ.
ಮೂತ್ರಪಿಂಡದ ಸಮಸ್ಯೆ ಇರುವವರು ಸಹ “ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಪನೀರ್, ಸೋಯಾಬೀನ್ ಮತ್ತು ಸೋಯಾ ಪನೀರ್ (ಟೊಫು), ಮೊಟ್ಟೆಯ ಬಿಳಿಭಾಗ ಮತ್ತು ಚಿಕನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು” ಎಂದು ಮರಾಠೆ ಅವರು ಹೇಳುತ್ತಾರೆ,
ಮೂತ್ರಪಿಂಡದ ಉತ್ತಮ ಆರೋಗ್ಯಕ್ಕಾಗಿ ಕಡಿಮೆ ಪೊಟ್ಯಾಸಿಯಮ್ ಮತ್ತು ಕಡಿಮೆ ಸೋಡಿಯಂ ಇರುವ ಆಹಾರವನ್ನು ಸೇವಿಸುವಂತೆ ಡಾ ರೋಹ್ಟಗಿ ಸಲಹೆ ನೀಡುತ್ತಾರೆ. ಹಣ್ಣುಗಳು ಮತ್ತು ತರಕಾರಿಗಳಂತಹ ನೈಸರ್ಗಿಕ ಮೂಲಗಳಿಂದ ಈ ಪೋಷಕಾಂಶಗಳನ್ನು ಪಡೆಯಲು ಉತ್ತಮ ಮೂಲಗಳಾಗಿವೆ. ಕಡಿಮೆ ಪೊಟ್ಯಾಸಿಯಮ್ ಇರುವ ಹಣ್ಣುಗಳಾದ ಪಪ್ಪಾಯಿ, ಸೇಬು, ಸೀಬೆ ಹಣ್ಣು, ಪೀಯರ್, ಅನಾನಸ್ ಮತ್ತು ಕಿತ್ತಳೆ ಹಣ್ಣುಗಳನ್ನು ಮೂತ್ರಪಿಂಡದ ಸಮಸ್ಯೆ ಹೊಂದಿರುವವರಿಗೆ ಮರಾಠೆ ಅವರು ಶಿಫಾರಸು ಮಾಡುತ್ತಾರೆ.
ರಂಜಕದ ಸಮೃದ್ಧ ಮೂಲಗಳಾಗಿರುವ ಬೇಳೆಕಾಳುಗಳಿಂದ ದೂರವಿರುವಂತೆ ರೊಹ್ಟಗಿ ಅವರು ಸಲಹೆ ನೀಡಿದರೆ, ಮರಾಠೆಯವರು ಬೇಳೆಗಳು, ಬೇಳೆಕಾಳುಗಳು ಮತ್ತು ಸೊಪ್ಪು ತರಕಾರಿಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸುವ ಮೂಲಕ ಅಡುಗೆ ಮಾಡುವ ಮೊದಲು ಫೈಟೇಟ್ ಮತ್ತು ಟ್ಯಾನಿನ್ ಗಳಂತಹ ಹಾನಿಕಾರಕ ಪೋಷಕಾಂಶಗಳನ್ನು ತೆಗೆದುಹಾಕುವಂತೆ ಸಲಹೆ ನೀಡುತ್ತಾರೆ.