‘ಜನಮೆಚ್ಚಿದ ಮನಃಶಾಸ್ತ್ರಜ್ಞ’ ಎಂದು ಕರೆಯಲ್ಪಡುವ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮನೋವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಇವರಿಗೆ ಈಗ 75 ವರ್ಷವಾಗಿದ್ದು, “ಸಮಾಧಾನ ಆಪ್ತ ಸಲಹಾ ಕೇಂದ್ರದ” ಸಂಚಾಲಕರು. ಇದು ಉಚಿತ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ನೀಡುತ್ತದೆ.
ಹ್ಯಾಪಿಯೆಸ್ಟ್ ಹೆಲ್ತ್ ಅವರೊಂದಿಗೆ ಸಂವಾದ ನಡೆಸಿದ್ದು, ಇದರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲಾಧಾರವಾಗಿರುವ ಮನಸ್ಸಿನ ಬಗ್ಗೆ ಅರಿವು ಮೂಡಿಸುವ ಅಗತ್ಯವನ್ನು ಅವರು ತಿಳಿಸಿದ್ದಾರೆ.
ಮನೋವಿಜ್ಞಾನದ ಕಡೆಗೆ ನಿಮ್ಮನ್ನು ಸೆಳೆದ ಅಂಶಗಳ್ಯಾವವು?
ನಾನು ಪ್ರೌಢಶಾಲಾ ಸಮಯದಿಂದಲೇ ಅಂದರೆ 1960 ರ ದಶಕದಲ್ಲಿ, ಅನೇಕ ಮನೋವಿಜ್ಞಾನ-ಸಂಬಂಧಿತ ಕಾದಂಬರಿಗಳು ಮತ್ತು ಕಥೆಗಳನ್ನು ಓದುತ್ತಿದ್ದೆ. ಆಗಲೇ ನನಗೆ ಈ ಕ್ಷೇತ್ರದ ಬಗ್ಗೆ ಕುತೂಹಲವಿತ್ತು. ನಾನು ಪ್ರಾರಂಭಿಸಿದಾಗ ಮಾನಸಿಕ ಆರೋಗ್ಯದ ಚರ್ಚೆಗಳು ಕಡಿಮೆಯಿತ್ತು ಮತ್ತು ಕರ್ನಾಟಕದಲ್ಲಿ ಮನೋವೈದ್ಯಶಾಸ್ತ್ರದ ಬಗ್ಗೆ ಅರಿವು ಕಡಿಮೆಯಿತ್ತು. ಆಗ ಕೇವಲ ಮೂರ್ನಾಲ್ಕು ವೃತ್ತಿಪರರು ಮಾತ್ರ ಅಭ್ಯಾಸ ಮಾಡುತ್ತಿದ್ದರು.
ಆ ಸಮಯದಲ್ಲಿ ಮೀಸಲಾದ ಮಾನಸಿಕ ಆರೋಗ್ಯ ಕೋರ್ಸ್ಗಳನ್ನು ಹೊಂದಿರುವ ಸಂಸ್ಥೆಗಳು ಕೆಲವೇ ಇದ್ದವು. ಕರ್ನಾಟಕದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಮತ್ತು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (DIMHANS) ಹೊರತುಪಡಿಸಿ ಬೇರೆ ಯಾವುದೇ ಕಾಲೇಜುಗಳು ಇರಲಿಲ್ಲ. 1970 ರ ದಶಕದಲ್ಲಿ, ಭಾರತದಲ್ಲಿ ಸುಮಾರು 40 ಮಾನಸಿಕ ಆಸ್ಪತ್ರೆಗಳಿದ್ದು, ಪ್ರತಿ ರಾಜ್ಯದಲ್ಲಿ ಕೇವಲ ಒಂದರಿಂದ ಎರಡು ಆಸ್ಪತ್ರೆಗಳಿದ್ದವು.
ಒಬ್ಬರು ವೈದ್ಯರು “ನೀನ್ಯಾಕೆ ವೈದ್ಯ ಆಗ್ಬೇಕು? ಅದರ ಬದಲು ಮನೋವೈದ್ಯರಾಗಿ, ಯಾಕೆಂದರೆ ಮನೋವೈದ್ಯರ ಅಗತ್ಯ ಹೆಚ್ಚಿದೆ” ಅಂತ ಕೇಳಿದ್ದರು. ಆಗಿನ ಕಾಲದಲ್ಲಿ ಮಾನಸಿಕ ಕಾಯಿಲೆಗಳು ಎಂದರೆ ಮೂಢನಂಬಿಕೆ ಇತ್ತು. ವೈದ್ಯರ ಬಳಿ ಹೋಗುವ ಬದಲು, ಮಾಟಮಂತ್ರದ ಮೊರೆ ಹೋಗುತ್ತಿದ್ದರು. ಅದಕ್ಕೆ ಏನೋ ಕೆಟ್ಟದ್ದು ಕಾರಣ ಎಂದು ನಂಬುತ್ತಿದ್ದರು. ಬೇರೆ ಕಾಯಿಲೆಗಳಿರುವವರಂತೆ ಮಾನಸಿಕ ಕಾಯಿಲೆ ಇರುವವರಿಗೆ ಎಂದಿಗೂ ಸಹಾನುಭೂತಿ ಸಿಗುತ್ತಿರಲಿಲ್ಲ. ಈ ಮಾನಸಿಕ ಆರೋಗ್ಯ ವೃತ್ತಿಪರರ ಕೊರತೆ ಮತ್ತು ಮಾನಸಿಕ ಕಾಯಿಲೆಗಳ ಬಗ್ಗೆ ಇದ್ದ ಮಾಹಿತಿಯ ಕೊರತೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ನನ್ನನ್ನು ಪ್ರೇರೇಪಿಸಿತು.
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಬಗ್ಗೆ ಮೊದಲು ಮತ್ತು ಈಗ ಇರುವ ವ್ಯತ್ಯಾಸವೇನು?
ಕರ್ನಾಟಕದ ಜಿಲ್ಲೆಗಳಾದ್ಯಂತ ಕೆಲಸ ಮಾಡಿದ ಅನುಭವ ನನಗಿದೆ. ಅನೇಕ ಕುಟುಂಬಗಳು ಮಾನಸಿಕ ಅಸ್ವಸ್ಥರನ್ನು ಕೊಳಕು ಕೋಣೆಗಳಲ್ಲಿ ಬಿಟ್ಟು, ಕಿಟಕಿಯ ಮೂಲಕ ಆಹಾರ ನೀಡಿ, ಸ್ನಾನ ಮತ್ತು ಮಲವಿಸರ್ಜನೆಗೆ ಮಾತ್ರ ಬಿಡುತ್ತಿದ್ದುದ್ದನ್ನೂ ನಾನು ನೋಡಿದ್ದೇನೆ. ಅವರನ್ನು ಹೊರಬರಲು ನಾವು ಸಹಾಯ ಮಾಡಿದ್ದೇವೆ ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ನೀಡಿದ್ದೇವೆ.
ನನ್ನ ಬ್ಯಾಚ್ನಿಂದ ಮನೋವೈದ್ಯಶಾಸ್ತ್ರವನ್ನು ವಿಶೇಷತೆಯಾಗಿ ತೆಗೆದುಕೊಂಡ ಏಕೈಕ ವ್ಯಕ್ತಿ ನಾನಾಗಿದ್ದೆ . ಹಿಂದೆ ತಿರುಗಿ ನೋಡಿದರೆ, 1970 ರ ದಶಕದಿಂದ ಇಲ್ಲಿಯವರೆಗೆ ಮನೋವೈದ್ಯಶಾಸ್ತ್ರವು ಅಗಾಧವಾಗಿ ಬೆಳೆದಿದೆ. ಆ ಸಮಯದಲ್ಲಿ ಭಾರತದಲ್ಲಿ 500 ಮನೋವೈದ್ಯರೂ ಇರಲಿಲ್ಲ.
ಎಲ್ಲಾ ವೈದ್ಯಕೀಯ ಕಾಲೇಜುಗಳು ಮಾನಸಿಕ ಆರೋಗ್ಯ ವೃತ್ತಿಪರರಿಗೆ ತರಬೇತಿ ಕೇಂದ್ರಗಳಾಗುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಕಾಲಾನಂತರದಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಿದ್ದಾರೆ. ನಾವು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಸಹ ವಿನ್ಯಾಸಗೊಳಿಸಿದ್ದೇವೆ. ಇದರಲ್ಲಿ ಸಾಮಾನ್ಯ ನಾಗರಿಕರಿಗೆ ರೋಗಿಗಳಿಗೆ ಸೂಕ್ತವಾದ ಆರೈಕೆಯನ್ನು ನೀಡಲು ತರಬೇತಿ ನೀಡಿದ್ದು, ಈ ಕಾರ್ಯಕ್ರಮದಡಿ ಸುಮಾರು 15,000 ಜನರಿಗೆ ಚಿಕಿತ್ಸೆ ನೀಡಲಾಗಿದೆ. [ಕಾರ್ಯಕ್ರಮ] ನಂತರ ಹಲವಾರು ಇತರ ರಾಜ್ಯಗಳಲ್ಲಿ ಪುನರಾವರ್ತಿಸಲಾಯಿತು.
ಇಂದು, ಸುಮಾರು 400 ಜಿಲ್ಲೆಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮವಿದ್ದು, ಕರ್ನಾಟಕದಲ್ಲಿ ಈಗ 60 ವೈದ್ಯಕೀಯ ಕಾಲೇಜಗಳಿವೆ ಮತ್ತು ಅವೆಲ್ಲವೂ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಹೊಂದಿದೆ. ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದುಕೊಂಡರೂ ಮನ್ನಣೆ ವಿಷಯದಲ್ಲಿ ಮನೋವೈದ್ಯಶಾಸ್ತ್ರವು ಇನ್ನೂ ನಿರ್ಲಕ್ಷಿಸಲ್ಪಟ್ಟ ಕ್ಷೇತ್ರವಾಗಿದೆ.
ಸಮಾಲೋಚನೆ/ಚಿಕಿತ್ಸೆ ದುಬಾರಿ ಎನ್ನುವ ಮಾತಿದೆ. ಆದರೆ ಅದನ್ನು ಉಚಿತವಾಗಿ ಹೇಗೆ ನಿರ್ವಹಿಸುತ್ತೀರಿ?
ಕೈಗೆಟುಕುವುದು ಮತ್ತು ಸ್ವೀಕಾರಾರ್ಹತೆಯು ಆರೋಗ್ಯ ಕ್ಷೇತ್ರದ ನಿರ್ಣಾಯಕ ಅಂಶಗಳಾಗಿವೆ. ಆದರೆ ಈಗ ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿದೆ. ಸುಮಾರು 80 ರಷ್ಟು ಕ್ಷೇತ್ರವು ಖಾಸಗೀಕರಣಗೊಂಡಿದೆ. ಹಲವಾರು ವೈದ್ಯರು ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಬದಲು ವಿದೇಶಕ್ಕೆ ತೆರಳುತ್ತಾರೆ ಅಥವಾ ಖಾಸಗಿ ಕ್ಲಿನಿಕ್ಗಳನ್ನು ಸ್ಥಾಪಿಸುತ್ತಾರೆ. ಖಾಸಗೀಕರಣದಿಂದ ಸೇವೆ ದುಬಾರಿಯಾಗುತ್ತದೆ, ಏಕೆಂದರೆ ತಮ್ಮ ವ್ಯವಹಾರಗಳನ್ನು ನಿಭಾಯಿಸಲು ಲಾಭ ಮಾಡಿಕೊಳ್ಳಬೇಕು.
ನಾವು ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ, ತರಬೇತಿ ಪಡೆದ ವೃತ್ತಿಪರರಿಗೆ ಹೋಲಿಸಿದರೆ ಸಮಾನವಾಗಿ ಉತ್ತಮವಾಗಿರುವ ಸಾಮಾನ್ಯರಿಗೆ ತರಬೇತಿ ನೀಡಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ವೃತ್ತಿಪರರು ಮತ್ತು ನಮ್ಮಿಂದ ತರಬೇತಿ ಪಡೆದವರು ಸೇರಿದಂತೆ ಸ್ವಯಂಸೇವಕರ ಸಹಾಯದಿಂದ ನಾವು ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುತ್ತೇವೆ. ಕರ್ನಾಟಕದ ವಿವಿಧ ಭಾಗಗಳಿಂದ ಜನರು ಪ್ರತಿದಿನ ಭೇಟಿ ನೀಡುತ್ತಾರೆ ಮತ್ತು ಸಹಾಯ ಪಡೆಯುತ್ತಿದ್ದಾರೆ.
ಮಾನಸಿಕ ಆರೋಗ್ಯಕ್ಕೆ ಆದ್ಯತೆ ಹೆಚ್ಚಿಸುವ ಗುರಿ ಬಗ್ಗೆ ತಿಳಿಸಿ
ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಗುರುತಿಸಲು ಹೆಚ್ಚಿನ ಪ್ರಯತ್ನಗಳಾಗಬೇಕಿದೆ. ಭಾರತದ ಸಂವಿಧಾನದಲ್ಲಿ ಪ್ರಸ್ತುತ ಆರೋಗ್ಯದ ಹಕ್ಕನ್ನು ಸ್ಪಷ್ಟವಾಗಿ ಖಾತ್ರಿ ಪಡಿಸಿಲ್ಲ. ಆರೋಗ್ಯವನ್ನು ಮಾನವ ಹಕ್ಕು ಎಂಬಂತೆ ಬಿಂಬಿಸುವುದು ಅಗತ್ಯವಾಗಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗಬೇಕಿದೆ.
ಮನಸ್ಸು ಕೂಡ ಅನಾರೋಗ್ಯಕ್ಕೆ ಒಳಗಾಗುತ್ತದೆ ಮತ್ತು ಇದು ಎಲ್ಲಾ ಮನೋದೈಹಿಕ ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಾವು ಜನರಿಗೆ ತಿಳಿಸಬೇಕು. ಸೋಂಕುಗಳೂ ಸೇರಿದಂತೆ ಸುಮಾರು 80 ಪ್ರತಿಶತ ರೋಗಗಳಿಗೆ ಕಾರಣ ಮಾನಸಿಕ ಅಸ್ವಸ್ಥತೆ. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಮನಸ್ಸು ಮೂಲ. ಎಲ್ಲಾ ವಯಸ್ಸಿನವರಲ್ಲಿ ನಿದ್ರೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಒತ್ತಡದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಜನರು ಕೆಲಸದ ಒತ್ತಡ, ಹದಗೆಡುತ್ತಿರುವ ಆರೋಗ್ಯ ಸಮಸ್ಯೆಗಳು ಮತ್ತು ನಿದ್ರೆಯ ಕೊರತೆಯಿಂದ ತೊಂದರೆಗೊಳಗಾಗುತ್ತಿದ್ದಾರೆ. ಜನರು ತಮ್ಮ ಮೊಬೈಲ್ ಫೋನ್ಗಳಲ್ಲಿ ಮುಳುಗಿದ್ದು, ನಿರಂತರವಾಗಿ ಸ್ಕ್ರೋಲ್ ಮಾಡುತ್ತಿರುವುದರಿಂದ ಡಿಜಿಟಲ್ ಚಟ ಸಮಸ್ಯೆಯಾಗಿ ಮಾರ್ಪಾಟಾಗಿದೆ.
ಮಾನಸಿಕ ಯೋಗಕ್ಷೇಮವನ್ನು ಸಾಧಿಸಲು ಏನು ಮಾಡಬೇಕು?
ಪ್ರತಿಯೊಬ್ಬರೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯ ಆರೈಕೆಗೆ ಆದ್ಯತೆ ನೀಡುವಾಗ, ಕೆಲವೊಮ್ಮೆ ಆರೈಕೆದಾರರೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ರೋಗಿಗಳು ಕೂಗುವುದು, ಔಷಧಿಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದು ಅಥವಾ ಕೌನ್ಸೆಲಿಂಗ್ ಸೆಷನ್ಗಳಿಗೆ ಹಾಜರಾಗುವುದು ಮುಂತಾದ ನಿರಂತರ ಸಮಸ್ಯೆಗಳನ್ನು ಎದುರಿಸುವಾಗ ಆರೈಕೆದಾರರಿಗೆ ಕೇರ್ ಗೀವರ್ ಬರ್ನ್ ಔಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಾವು ಪ್ರಾಥಮಿಕ ಕಾರ್ಯಗಳಾದ ನಿದ್ರೆ, ಹಸಿವು ಮತ್ತು ಲೈಂಗಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಗಮನದಲ್ಲಿರಿಸಿಕೊಳ್ಳಬೇಕು. ಸಾಮಾಜಿಕ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು. ನಿಯಮಿತ ವ್ಯಾಯಾಮ ಮಾಡುವುದು ಮತ್ತು ದೈನಂದಿನ ಕೆಲಸವನ್ನು ಆನಂದಿಸಬೇಕು. ಇಂತಹ ಅಭ್ಯಾಸಗಳಿಂದ ದೀರ್ಘಾವಧಿಯಲ್ಲಿ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ ಮತ್ತು ಸಂತೋಷವಾಗಿರಬಹುದು.