ಅಲ್ಝೈಮರ್ ಕಾಯಿಲೆಯು 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಡೆಮೆನ್ಷಿಯಾ ಅಥವಾ ಮರೆವಿನ ಅತ್ಯಂತ ಸಾಮಾನ್ಯ ರೂಪವಾಗಿದೆ. ಇದಕ್ಕೆ ಕೆಲವು ಅಪವಾದಗಳು ಅಸ್ತಿತ್ವದಲ್ಲಿದ್ದರೂ, ವಯಸ್ಸಾಗುವುದು ಅಲ್ಝೈಮರ್ನಲ್ಲಿ ಕಂಡುಬರುವ ಅತಿ ಹೆಚ್ಚು ಅಪಾಯಕಾರಿ ಅಂಶವಾಗಿದೆ.
ಅಲ್ಝೈಮರ್ ಹೊಂದಿರುವವರು ಹಿಂದಿರುಗಿ ಪಡೆಯಲಾಗದಂತೆ ನೆನಪಿನ ಶಕ್ತಿಯ ನಷ್ಟ, ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಥವಾ ಹೊಸ ಕೌಶಲ್ಯಗಳನ್ನು ಯೋಚಿಸಲು ಮತ್ತು ಕಲಿಯಲು ಅಸಮರ್ಥತೆಯನ್ನು ಎದುರಿಸುತ್ತಾರೆ. ಕಾಯಿಲೆಯು ಅವರ ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದೆ: ಅವರು ಹಠಾತ್ ಪ್ರವೃತ್ತಿಯ, ದಿಕ್ಕು ತೋಚದ ಮತ್ತು ಏನನ್ನೂ ಊಹಿಸಲಾಗದ ವ್ಯಕ್ತಿಗಳಾಗುತ್ತಾರೆ, ಇದರ ತೀವ್ರತೆ ವಯಸ್ಸಿಗೆ ಅನುಗುಣವಾಗಿ ಹೆಚ್ಚಾಗುತ್ತದೆ.
ಮೆದುಳಿನಲ್ಲಿರುವ ನರಕೋಶಗಳಿಗೆ ಹಾನಿಯಾಗುವುದರಿಂದ ವ್ಯಕ್ತಿಯ ಸ್ಥಿತಿ ಕ್ರಮೇಣ ಹದಗೆಡುತ್ತದೆ, ಅದು ಕ್ಷೀಣಿಸಲು ಪ್ರಾರಂಭಿಸುತ್ತದೆ. ಅಮಿಲಾಯ್ಡ್–ಬೀಟಾ (amyloid-beta) ಮತ್ತು ಟೌ (tau) ಎಂದು ಕರೆಯಲ್ಪಡುವ ಪ್ರೋಟೀನ್ಗಳು ಮೆದುಳಿನ ಅಂಗಾಂಶದಲ್ಲಿ ಸಂಗ್ರಹವಾಗುವುದರಿಂದ ನರಗಳ ಹಾನಿ ಸಂಭವಿಸುತ್ತದೆ, ಇದು ನರಕೋಶಗಳ ನಡುವಿನ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧನೆಯು ಅಲ್ಝೈಮರ್ ಕಾಯಿಲೆಗೆ ಕಾರಣವಾಗುವ ಇತರ ಅಂಶಗಳನ್ನು ಸಹ ಕಂಡುಹಿಡಿದಿದೆ.
ಪ್ರಸ್ತುತ, ಅಲ್ಝೈಮರ್ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ; ಆದ್ದರಿಂದ, ರೋಗದ ಬೆಳವಣಿಗೆಯನ್ನು ನಿಧಾನಗೊಳಿಸಲು ಆರಂಭಿಕ ರೋಗನಿರ್ಣಯವು ಅತ್ಯುತ್ತಮ ಆಯ್ಕೆಯಾಗಿದೆ. ಕೆಲವು ಶಿಫಾರಸು ಮಾಡಿದ ಔಷಧಿಗಳು ನರಪ್ರೇಕ್ಷಕ/ನ್ಯೂರೋಟ್ರಾನ್ಸ್ಮಿಟರ್ಸ್ ಚಟುವಟಿಕೆಗಳನ್ನು ಅಡ್ಡಿಪಡಿಸುವುದರಿಂದ ಉಂಟಾಗುವ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ನರಪ್ರೇಕ್ಷಕಗಳು/ನ್ಯೂರೋಟ್ರಾನ್ಸ್ಮಿಟರ್ಸ್ ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕಗಳಾಗಿವೆ, ಅವು ನರಕೋಶದಲ್ಲಿ ಸಂವಹನವನ್ನು ಸಕ್ರಿಯಗೊಳಿಸುತ್ತವೆ). ಜಪಾನಿನ ಸಂಸ್ಥೆ ಐಸಾಯ್ ಮತ್ತು ಯುಎಸ್ ಬಯೋಟೆಕ್ ಸಂಸ್ಥೆ ಬಯೋಜೆನ್ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಲೆಕಾನೆಮಾಬ್ ಎಂಬ ಔಷಧವು ಕ್ಲಿನಿಕಲ್ ಪ್ರಯೋಗದಲ್ಲಿ ರೋಗದ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಎಂಬುದನ್ನು ಸಾಬೀತುಗೊಳಿಸಿದೆ.
ಸಸ್ಯ ಆಧಾರಿತ ಔಷಧ ಸಂಯುಕ್ತಗಳು
ಆದರೂ, ಔಷಧಿಗಳಲ್ಲಿ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಹೀಗಾಗಿ ಕಳೆದ ಎರಡು ದಶಕಗಳಿಂದ ಸಂಶೋಧಕರು ಈ ಕಾಯಿಲೆಗೆ ಚಿಕಿತ್ಸೆ ನೀಡಲು ಸಸ್ಯ ಸಾರಗಳಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವ ಜೈವಿಕ ಸಂಯುಕ್ತಗಳಲ್ಲಿ ತಮ್ಮ ಅನ್ವೇಷಣೆಯನ್ನು ಆರಂಭಿಸಿದ್ದಾರೆ. ಆಯುರ್ವೇದ ಔಷಧ ಪದ್ಧತಿಯಲ್ಲಿ ಹೆಚ್ಚಾಗಿ ಬಳಸುವ ಕೇಸರಿ, ಅರಸಿನ ಮತ್ತು ಭಾರತೀಯ ಮೂಲದ ನೆಲ್ಲಿಕಾಯಿಯಲ್ಲಿನ ಸಕ್ರಿಯ ಸಂಯುಕ್ತಗಳು ಅಮಿಲಾಯ್ಡ್-ಬೀಟಾ (amyloid-beta) ಕ್ಲಸ್ಟರ್ಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಅಧ್ಯಯನಗಳು ನಿರೂಪಿಸಿವೆ. ಈ ಗುಣದೊಂದಿಗೆ ಕೇಸರಿ ಪ್ರಬಲ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಏಜೆಂಟ್/ಪ್ರಚೋದಕ ಕೂಡ ಹೌದು ಎಂಬುದನ್ನು ಈ ಸಂಶೋಧನೆಗಳು ತೋರಿಸಿವೆ.
ʼಜರ್ನಲ್ ಆಫ್ ಅಲ್ಝೈಮರ್ಸ್ ಡಿಸೀಸ್ʼನಲ್ಲಿ ಪ್ರಕಟವಾದ 2016ರ ಅಧ್ಯಯನದಲ್ಲಿ, ಸಂಶೋಧಕರು ಅಲ್ಝೈಮರ್ ಹೊಂದಿರುವ 17 ಜನರ ಸಣ್ಣ ಗುಂಪಿಗೆ 12 ತಿಂಗಳ ಕಾಲ ಕೇಸರಿ ಕ್ಯಾಪ್ಸೂಲ್ಗಳನ್ನು ನೀಡಿದರು. ಸಣ್ಣ ಅಡ್ಡಪರಿಣಾಮಗಳೊಂದಿಗೆ ಆ ಗುಂಪು ಅರಿವಿನ ಸಾಮರ್ಥ್ಯಗಳಲ್ಲಿ ಸುಧಾರಣೆಯನ್ನು ತೋರಿಸಿದೆ ಎಂದು ಅವರು ಕಂಡುಕೊಂಡರು.
ʻಎಸಿಎಸ್ ಒಮೆಗಾʼದಲ್ಲಿ ಪ್ರಕಟವಾದ ಮತ್ತೊಂದು ಸಂಶೋಧನಾ ಅಧ್ಯಯನದಲ್ಲಿ, ಜಮ್ಮುವಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಟಿಗ್ರೇಟಿವ್ ಮೆಡಿಸಿನ್(ಐಐಐಎಂ–ಜಮ್ಮು)ನ ಸಂಶೋಧಕರು ಕೇಸರಿ ಸಂಯುಕ್ತಗಳ ಸಾಮರ್ಥ್ಯವನ್ನು ಪರಿಶೀಲಿಸಿದರು. ಕೇಸರಿ ಹೂವಿನ ಶಲಾಕಾಗ್ರವು ಕ್ರೋಸಿನ್ ಎಂಬ ರಾಸಾಯನಿಕ ಸಂಯುಕ್ತವನ್ನು ಹೊಂದಿದ್ದು, ಇದು 16 ಸಕ್ರಿಯ ಅಲ್ಝೈಮರ್ ನಿರೋಧಕ ರಾಸಾಯನಿಕಗಳನ್ನು ಹೊಂದಿದೆ, ಎಂದು ಅವರು ಕಂಡುಕೊಂಡರು.
ಪ್ರಯೋಗಾಲಯ ಮತ್ತು ಇಲಿಗಳ ಮೇಲಿನ ಪ್ರಯೋಗಗಳಲ್ಲಿ ಅಮಿಲಾಯ್ಡ್–ಬೀಟಾ ಪ್ಲಾಕ್ಗಳನ್ನು ತೆರವುಗೊಳಿಸುವಲ್ಲಿ ಕೇಸರಿ ಸಾರ ಮತ್ತು ಅದರ ಘಟಕ ‘ಕ್ರೋಸಿನ್‘ನ ಪರಿಣಾಮಕಾರಿತ್ವವನ್ನು ತಂಡವು ಮೌಲ್ಯಮಾಪನ ಮಾಡಿತು.
ಜಮ್ಮುವಿನ ಐಐಐಎಂನ ಹಿರಿಯ ಪ್ರಧಾನ ವಿಜ್ಞಾನಿ ಡಾ. ಸಂದೀಪ್ ಬಿ. ಭರತೆ ಅವರು ಹ್ಯಾಪಿಯೆಸ್ಟ್ ಹೆಲ್ತ್ಗೆ ಹೀಗೆ ಹೇಳುತ್ತಾರೆ: “ಕ್ರೋಸಿನ್ಗಳು ಕೇಸರಿಯ ಪ್ರಮುಖ ಘಟಕಗಳಾಗಿದ್ದು, ಪ್ರೊಡ್ರಗ್ಗಳಾಗಿ ಕಾರ್ಯನಿರ್ವಹಿಸುತ್ತದೆ. ಕೇಸರಿ ಅಥವಾ ಅದರ ಸಾರವನ್ನು ಬಾಯಿಯ ಮೂಲಕ ಸೇವಿಸಿದಾಗ, ಕೇಸರಿಯಲ್ಲಿರುವ ಕ್ರೋಸಿನ್ಗಳು ಜೀರ್ಣಾಂಗವ್ಯೂಹದಲ್ಲಿ ಕ್ರೋಸೆಟಿನ್ ಆಗಿ ಪರಿವರ್ತನೆಗೊಳ್ಳುತ್ತವೆ. ಕ್ರೋಸೆಟಿನ್ ಪೊರೆಗಳ ಮೂಲಕ ಪ್ರವೇಶಿಸುತ್ತದೆ, ರಕ್ತ ಪರಿಚಲನೆಯನ್ನು ತಲುಪುತ್ತದೆ ಮತ್ತು ಅಲ್ಲಿಂದ, ಇದು ರಕ್ತ–ಮೆದುಳಿನ ತಡೆಗೋಡೆಯನ್ನು ದಾಟಿ ಮೆದುಳಿನ ಒಳಗೆ ತಲುಪಿ ಅಲ್ಝೈಮರ್ ನಿರೋಧಕ ಚಟುವಟಿಕೆಯನ್ನು ತೋರಿಸುತ್ತದೆ.” ರಕ್ತ–ಮೆದುಳಿನ ತಡೆಗೋಡೆಯು ಮೆದುಳಿನ ರಕ್ಷಣಾತ್ಮಕ ಪದರವಾಗಿದೆ.
ಅವರ ಪ್ರಕಾರ ಕ್ರೋಸೆಟಿನ್ ಮೆದುಳಿನಲ್ಲಿರುವ ಅಮಿಲಾಯ್ಡ್ ಕ್ಲಸ್ಟರ್ನನ್ನು ಎರಡು ರೀತಿಯಲ್ಲಿ ತೆರವುಗೊಳಿಸುತ್ತದೆ. “ಮೊದಲನೆಯದಾಗಿ, ಕ್ರೋಸೆಟಿನ್ ಮೆದುಳಿನಲ್ಲಿ ಆಟೋಫಾಜಿ (ಜೀವಕೋಶದಲ್ಲಿನ ವಿಷಕಾರಿ ಅಂಶಗಳ ಸ್ವಯಂ–ತೆರವುಗೊಳಿಸುವಿಕೆಯ ಕಾರ್ಯವಿಧಾನ)ಕ್ರಿಯೆಯನ್ನು ಪ್ರಾರಂಭಿಸುತ್ತದೆ. ಎರಡನೆಯದಾಗಿ, ಇದು ರಕ್ತನಾಳ–ಮೆದುಳಿನ ನಡುವೆ ತಡೆಯಂತಿರುವ ಪಿಜಿಪಿ – PgP ಎಂಬ ಟ್ರಾನ್ಪೋರ್ಟರ್/ಸಾಗಣಿಕಾ ಪ್ರೋಟೀನ್ನ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದು ಮೆದುಳಿನಿಂದ ರಕ್ತದ ಹರಿವಿನ ಜೊತೆ ಅಮಿಲಾಯ್ಡ್–ಬೀಟಾವನ್ನು ಹೊರಹಾಕುತ್ತದೆ.” ನಮ್ಮ ಕ್ಲಿನಿಕಲ್ ಪೂರ್ವ ಅಧ್ಯಯನಗಳ ಪ್ರಕಾರ, ಕೇಸರಿಯ ಸಾರವು ಪ್ರಾಣಿಗಳಲ್ಲಿ ನೆನಪು ಮತ್ತು ಕಲಿಕಾ ಸಾಮರ್ಥ್ಯಗಳನ್ನು ಸುಧಾರಿಸಿದೆ. ಪ್ರಯೋಗಗಳ ಸಮಯದಲ್ಲಿ ಕೇಸರಿ ಸಾರ ಮತ್ತು ಇದರಿಂದ ಹೊರತೆಗೆದ ಸಂಯುಕ್ತವು ಯಾವುದೇ ಅಡ್ಡ ಪರಿಣಾಮಗಳನ್ನು ಬೀರಲಿಲ್ಲ ಎಂದು ಅವರು ಹೇಳುತ್ತಾರೆ.
ಮತ್ತೊಂದು ಅಧ್ಯಯನವು ಪ್ರಯೋಗಾಲಯದ ಪ್ರಯೋಗಗಳಲ್ಲಿ ಕ್ರೋಸೆಟಿನ್ ರಕ್ತ–ಮೆದುಳಿನ ತಡೆಗೋಡೆಯನ್ನು ಆಕ್ರಮಿಸಬಹುದು ಎಂದು ಕಂಡುಹಿಡಿದಿದೆ.
ಕೇಸರಿ – ಆಯುರ್ವೇದ ಏನು ಹೇಳುತ್ತದೆ?
ಭಾರತದಲ್ಲಿ, ಕೇಸರಿ ಅಥವಾ ಕೇಸರ್ ಸಾಂಪ್ರದಾಯಿಕವಾಗಿ ಔಷಧಿ, ಮಸಾಲೆ ಮತ್ತು ಸೌಂದರ್ಯವರ್ಧಕ ಸಾಧನವಾಗಿ ಸಹಕಾರಿಯಾಗಿ ಬಳಕೆಯಾಗುತ್ತದೆ.
ಆಗ್ರಾದ ಆಯುರ್ವೇದ ತಜ್ಞರಾದ ಡಾ. ಅಮಿತ್ ಶರ್ಮಾ, ಆಯುರ್ವೇದ ಪಠ್ಯಗಳು ಮಾನಸಿಕ ಸಾಮರ್ಥ್ಯಗಳ ಮೂರು ಅಂಶಗಳನ್ನು ಉಲ್ಲೇಖಿಸುತ್ತವೆ ಎನ್ನುತ್ತಾರೆ ಅವು, ಧಿ (ಕಲಿಕೆ), ಧುತಿ (ಉಳಿಸಿಕೊಳ್ಳುವಿಕೆ) ಮತ್ತು ಸ್ಮೃತಿ (ನೆನಪಿಸಿಕೊಳ್ಳುವುದು). ಎಲ್ಲಾ ಮೂರು ಮಾನಸಿಕ ಪ್ರಕ್ರಿಯೆಗಳಲ್ಲಿನ ದುರ್ಬಲತೆಯು ಡೆಮೆಂಷಿಯಾಗೆ ಕಾರಣವಾಗಬಹುದು, ಎಂದು ಹೇಳುತ್ತಾರೆ.
“ ಅಲ್ಝೈಮರ್ ರೋಗಲಕ್ಷಣಗಳು ಕಾಣಿಸಿಕೊಂಡಾಗ ಆರಂಭಿಕ ಹಂತದಲ್ಲಿಯೇ ಅದನ್ನು ಗುಣಪಡಿಸಲು ನಾವು ಕೇಸರಿ, ಅರಿಶಿನ ಮತ್ತು ಭಾರತದಲ್ಲಿ ಸಿಗುವ ನೆಲ್ಲಿಕಾಯಿಯ ಮಿಶ್ರಣವನ್ನು ಸೂಚಿಸುತ್ತೇವೆ,” ಎಂದು ಡಾ ಶರ್ಮಾ ಹೇಳುತ್ತಾರೆ. “ಇದಲ್ಲದೆ, ಇದರೊಂದಿಗೆ ಕಾಣಿಸಿಕೊಳ್ಳುವ ಇತರ ಸಂಬಂಧಿತ ರೋಗಲಕ್ಷಣಗಳನ್ನು ಗಮನಿಸಿ ಅಶ್ವಗಂಧ, ಶಂಖಪುಷ್ಪಿ ಮತ್ತು ಒಂದೆಲಗ ಮುಂತಾದವುಗಳ(ಗಿಡಮೂಲಿಕೆಗಳ) ಮಿಶ್ರಣವನ್ನು ನೀಡಲಾಗುತ್ತದೆ.”
ಕೇಸರಿ – ಅಧ್ಯಯನದ ಉತ್ತೇಜನಕಾರಿ ಫಲಿತಾಂಶಗಳು
ಕೇಸರಿಯು ಮನಸ್ಸನ್ನು ಮುದಗೊಳಿಸುತ್ತದೆ ಎಂದು ಆರ್ಯುವೇದದಲ್ಲಿ ಹೇಳಲಾಗಿದೆ. ಕೇಸರಿಯು ಸೆರೋಟೋನಿನ್ (serotonin), ಡೋಪಮೈನ್ (dopamine) ಮತ್ತು ನೋರ್ಪೈನ್ಫ್ರಿನ್ನಂತಹ (norepinephrine) ನರಪ್ರೇಕ್ಷಕಗಳ ಮಟ್ಟನ್ನು ಹೆಚ್ಚಿಸುತ್ತದೆ. ಈ ಮೂಲಕ ಖಿನ್ನತೆ, ಆತಂಕ ಮತ್ತು ಬುದ್ಧಿಮಾಂದ್ಯತೆ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ ಎಂದು ಸಂಶೋಧನೆಗಳು ನಿರೂಪಿಸಿವೆ.
ಡಾ. ಭರತೆ “ಕೇಸರಿಯ ಸಾರವು ಅಮಿಲಾಯ್ಡ್–ಬೀಟಾ ಮತ್ತು ಉರಿಯೂತದ ವಿಷಕಾರಿ ಪರಿಣಾಮಗಳಿಂದ ನರಕೋಶಗಳನ್ನು ರಕ್ಷಿಸುತ್ತದೆ ಎಂಬುದನ್ನು ನಾವು ಈಗಾಗಲೇ ಕಂಡುಕೊಂಡಿದ್ದೇವೆ. ಹೀಗಾಗಿ, ಕೇಸರಿ ಸೇವನೆಯು ಅಲ್ಝೈಮರ್ ಕಾಯಿಲೆಯು ಉಲ್ಬಣಿಸುವುದನ್ನು ನಿಧಾನಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ,” ಎನ್ನುತ್ತಾರೆ. ಕೇಸರಿಯ ಸಾರವನ್ನು ಬಳಸಿ ತಯಾರಿಸಲಾಗುವ ಕ್ಯಾಪ್ಸೂಲ್ನ ಸೂತ್ರೀಕರಣದ ಪೇಟೆಂಟ್/ಹಕ್ಕುಸ್ವಾಮ್ಯ ಪಡೆಯಲು ಸಂಶೋಧಕರು ಈಗಾಗಲೇ ಅನೇಕ ದೇಶಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಹೇಳುತ್ತಾರೆ.