“ನನ್ನ ಮಗ ವಿಪರೀತ ಒರಟಾಗಿದ್ದು, ಯಾವಾಗಲೂ ಬಾಗಿಲುಗಳತ್ತ ನಡೆಯುತ್ತಿದ್ದ ಅಥವಾ ಓಡಿಕೊಂಡು ಡಿಕ್ಕಿ ಹೊಡೆಯುತ್ತಿದ್ದ. ಅವನ ತರಗತಿಯಲ್ಲಿ ಕುರ್ಚಿಯನ್ನು ಸರಸಿದ್ದರೂ, ಆ ಬದಲಾವಣೆ ಅವನ ಮನಸ್ಸಿನಲ್ಲಿ ಗ್ರಹಿಸುವುದು ಸಾಧ್ಯವಾಗದ ಕಾರಣ ಅದಿದ್ದ ಜಾಗಕ್ಕೆ ಹೋಗಿ ಅದಕ್ಕೆ ಢಿಕ್ಕಿ ಹೊಡೆಯುತ್ತಿದ್ದ. ವೃತ್ತಾಕಾರದಲ್ಲಿ ಕೂತು ಆಟ ಆಡುವ ವೇಳೆ, ಅವನು ವಿರೋಧ ಧಿಕ್ಕಿನಲ್ಲಿ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದ ಮತ್ತು ಎದುರಿನಿಂದ ಬಂದು ಎದೆಗೆ ಎದೆ ಕೊಟ್ಟು ತಬ್ಬಿಕೊಳ್ಳುವ ಬದಲು ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಿದ್ದ,” ಎಂದು ಹೇಳುತ್ತಾರೆ ಕ್ಯಾಲಿಪೋರ್ನಿಯಾದ ಪಾಯಲ್ ಕುಮಾರ್ ಅವೆಲ್ಲನ್.
ಯಾವಾಗ ಕಾಳಜಿ ವಹಿಸಬೇಕು?
ಬಾಲ್ಯದ ಬೆಳವಣಿಗೆಯಲ್ಲಿ ಕೆಲವೊಮ್ಮೆ ನಾಜೂಕಿಲ್ಲದೆ ವರ್ತಿಸುವುದು ಸಾಮಾನ್ಯವಾಗಿರುತ್ತದೆ. ʻʻಆದರೆ, ಸಾಲುಸಾಲಾಗಿ ಒರಟು ವರ್ತನೆ, ವಿಶೇಷವಾಗಿ ದಿನನಿತ್ಯದ ಚಟುವಟಿಕೆಗಳನ್ನು ಮಾಡುವಾಗ, ಆಗುತ್ತಿದ್ದರೆ ಅದು ಕಳವಳಕಾರಿ ಆಗಬಹುದು,” ಎಂದು ನರಗಳ ಬೆಳವಣಿಗೆ ಹಾಗೂ ಮಕ್ಕಳ ನಡವಳಿಕೆ ತಜ್ಞರಾಗಿರುವ ಮಂಗಳೂರಿನ ಕಲರವ ಮಕ್ಕಳ ಅಭಿವೃದ್ಧಿ ಕೇಂದ್ರದ ಸ್ಥಾಪಕಿ, ಡಾ. ಶಿಲ್ಪಾ ಹೆಗ್ಡೆ ಅವರು ‘ಹ್ಯಾಪಿಯೆಸ್ಟ್ ಹೆಲ್ತ್’ ಜೊತೆಯಲ್ಲಿ ಮಾತಾಡುತ್ತಾ ಹೇಳುತ್ತಾರೆ. ಇದು ಬೆಳವಣಿಗೆಯಲ್ಲಿ ಸಮನ್ವಯತೆಯ ಅಸ್ವಸ್ಥತೆ (ಡಿಸಿಡಿ) ಕಾಯಿಲೆ ಆಗಿರಬಹುದು. “ಸಾಮಾನ್ಯವಾಗಿ ಐದನೇ ವಯಸ್ಸಿನಲ್ಲಿ ಮಗು ಶಾಲೆಗೆ ಹೋಗಲು ಆರಂಭಿಸುವ ಹಂತದಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಮಾಡುವಾಗ ಅನೇಕ ಸಮಸ್ಯೆಗಳನ್ನು ಎದುರಿಸುವುದರಿಂದ ಲಕ್ಷಣಗಳು ಗೋಚರವಾಗುತ್ತವೆ” ಎಂದು ಡಾ ಹೆಗ್ಡೆ ಹೇಳುತ್ತಾರೆ.
ತಮ್ಮ ಮಗ ಬಾಲ್ಯದ ಬೆಳವಣಿಗೆಯ ಸಾಮಾನ್ಯ ಮೈಲಿಗಲ್ಲುಗಳಾದ ತೆವಳುವುದು, ಕೂರುವುದು (ಕುಳಿತುಕೊಳ್ಳುವುದು) ಮತ್ತು ನಡೆಯುವುದು ಮೊದಲಾದ ಕ್ರಿಯೆಗಳನ್ನು ವಿಳಂಬವಾಗಿ ಆರಂಭಿಸಿದ್ದನ್ನು ಅವೆಲ್ಲಾನ್ ಅವರು ನೆನಪಿಸಿಕೊಳ್ಳುತ್ತಾರೆ. ಅವನು ಮೂರು ವರ್ಷದವನಿದ್ದಾಗ, ಮೆಟ್ಟಿಲುಗಳನ್ನು ಹತ್ತುವಾಗ ತನ್ನ ಕಾಲುಗಳನ್ನು ಬದಲಾಯಿಸದಿರುವುದನ್ನು ಅವರು ಗಮನಿಸುತ್ತಾರೆ.
ಬೆಂಗಳೂರು ಮೂಲದ ವೃತ್ತಿ ಚಿಕಿತ್ಸಕರಾಗಿರುವ (ಅಕ್ಯುಪೇಶನಲ್ ಥೆರಪಿಸ್ಟ್) ಡಾ. ಕೌಶಿಕ ವೆಂಕಟರಾಮನ್ ಅವರ ಪ್ರಕಾರ ಒಂದು ಚಿಕ್ಕ ಪರೀಕ್ಷೆಯು ಬೆಳವಣಿಗೆಯಲ್ಲಿ ವಿಳಂಬವನ್ನು ತಿಳಿದುಕೊಳ್ಳಲು ನೆರವಾಗಬಹುದು. ಉದಾಹರಣೆಗೆ, ಕುರ್ಚಿಯನ್ನು ಸರಿಸಿ ಹತ್ತಿಕೊಂಡು ಕಪಾಟಿನ ಮೇಲಿನಿಂದ ಏನನ್ನಾದರೂ ತೆಗೆಯುವುದು ಐದು ಅಥವಾ ಆರು ವರ್ಷದ ಮಗುವಿಗೆ ಸರಳವಾದ ಕೆಲಸ. ಡಿಸಿಡಿ ಸಮಸ್ಯೆಯುಳ್ಳ ಮಕ್ಕಳಿಗೆ ಅದು ಸವಾಲೆನಿಸಬಹುದು. ಅಂತಹ ಮಕ್ಕಳು ಸಹಾಯಕ್ಕಾಗಿ ತಮ್ಮ ಹೆತ್ತವರತ್ತ ನೋಡಬಹುದು. “ಅಂತಹ ಮಕ್ಕಳಿಗೆ ಮುಖ್ಯವಾಗಿ ಸಮಸ್ಸೆ ಉಂಟಾಗುವುದು ಏಕೆಂದರೆ ದಿನನಿತ್ಯದ ಕೆಲಸಗಳಿಗೆ ಮಿದುಳು ಮತ್ತೆ ದೇಹದೊಂದಿಗೆ ಸಮನ್ವಯತೆ ನೀಡುವ ದ್ವಿಪಕ್ಷೀಯ ಏಕೀಕರಣ (ಬೈಲ್ಯಾಟರಲ್ ಇಂಟೆಗ್ರೇಷನ್) ಅಗತ್ಯವಿದೆ,” ಎಂದು ವಿವರಿಸುತ್ತಾರೆ ಡಾ, ವೆಂಕಟರಾಮನ್.
ಉತ್ತಮ ಚಲನೆಯ ಕೌಶಲ್ಯಗಳು ಸುಪ್ತ ಡಿಸಿಡಿ ಸಮಸ್ಯೆಯ ಇನ್ನೊಂದು ಸೂಚಕವಾಗಿರಬುದು. ಮಗು ಪೆನ್ನು ಹಿಡಿಯುವ ಅಥವಾ ಪಾದರಕ್ಷೆಗಳ ದಾರಗಳನ್ನು (ಶೂಲೇಸ್ಗಳನ್ನು) ಕಟ್ಟುವ ರೀತಿ, ಅಸ್ಪಷ್ಟ ಕೈಬರಹ ಅಥವಾ ಕತ್ತರಿಗಳಂತಹ ಸಾಮಾನ್ಯ ಉಪಕರಣಗಳನ್ನು ಉಪಯೋಗಿಸುವುದೇ ಮೊದಲಾದವು ಇನ್ನಿತರ ಸೂಚಕಗಳಾಗಿವೆ.
ಅಂತರ್ಗತವಾಗಿರುವ ಮಿದುಳಿನ ಅಂಶಗಳು
ಡಿಸಿಡಿಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಅಂತರ್ಗತವಾಗಿರುವ ನರವೈಜ್ಞಾನಿಕ ಪರಿಸ್ಥಿತಿಗಳ ಪಾತ್ರವಿದೆ ಎಂದು ತಜ್ಞರು ಹೇಳುತ್ತಾರೆ. ಹಿಮ್ಮೆದುಳಿನ (ಸೆರೆಬೆಲ್ಲಮ್) ಭಾಗವು ದೇಹದ ಚಲನೆಯ ನಿಯಂತ್ರಣ, ಅರಿವು ಮತ್ತು ಸಮತೋಲನವನ್ನು ನಿಯಂತ್ರಿಸುತ್ತದೆ. ಸೆರೆಬೆಲ್ಲಮ್ ರಚನೆಯ ಕುರಿತ ಇತ್ತೀಚಿನ ಅಧ್ಯಯನವೊಂದರಲ್ಲಿ, ಡಿಸಿಡಿ ಕಾಯಿಲೆ ಇರುವ ಮಕ್ಕಳಲ್ಲಿ ತುಲನಾತ್ಮಕವಾಗಿ ಕಡಿಮೆ ಪ್ರಮಾಣದ “ಗ್ರೇಮ್ಯಾಟರ್” (ಮಿದುಳು ಮತ್ತು ಬೆನ್ನುಮೂಳೆಯೊಂದಿಗೆ ಸಮನ್ವಯತೆ ನಿಯಂತ್ರಿಸುವ ಮಿದುಳಿನ ಬೂದುದ್ರವ್ಯ) ಇರುತ್ತದೆ ಎಂದು ತಿಳಿದುಬಂದಿದೆ. ಡಿಸಿಡಿ ಕುರಿತು 2022 ರಲ್ಲಿ ನಡೆಸಿದ ಇನ್ನೊಂದು ಅಧ್ಯಯನವು ಈ ಕಾಯಿಲೆ ಇರುವವರ ದೈಹಿಕ ಚಟುವಟಿಕೆಗಳ ಮೇಲೆ ಮಿದುಳು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರೀಕ್ಷಿಸಿದೆ.
ಗರ್ಭಧಾರಣೆಯಿಂದ ಜನನದ ತನಕ ಅನೇಕ ಅಂಶಗಳು ಮೆದುಳಿನ ಕಾರ್ಯ ನಿರ್ವಹಣೆಯಲ್ಲಿ ಬೆಳವಣಿಗೆಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಾ. ಹೆಗ್ಡೆ ಹೇಳುತ್ತಾರೆ. ಆದರೆ, ಡಿಸಿಡಿ ಬಗ್ಗೆ ಅಸಮರ್ಪಕ ಸಂಶೋಧನೆಯಾಗಿದ್ದು, ಈ ಪ್ರಸ್ತಾಪಗಳ ಬಗ್ಗೆ ಭವಿಷ್ಯದ ಅಧ್ಯಯನಗಳು ಇನ್ನೂ ಆಳವಾದ ಸಂಶೋಧನೆ ಆಗಬೇಕೆಂದು ಅವರು ಅಭಿಪ್ರಾಯಪಡುತ್ತಾರೆ.
ಡಿಸಿಡಿಯ ಪ್ರಮುಖ ಲಕ್ಷಣಗಳು
ತನ್ನ ಹೆತ್ತವರು ಅಥವಾ ಶಿಕ್ಷಕರು ಹೋಲಿಕೆ ಮಾಡುವುದು ಅಥವಾ ಗದರಿಸುವಂತಹ ಒತ್ತಡಗಳಿಗೆ– ಸ್ವಾಭಾವಿಕ ಪ್ರತಿಕ್ರಿಯೆಯಗಿ ಒಂದು ಮಗು ತನ್ನ ವಯಸ್ಸಿಗೆ ಅನುಗುಣವಾಗಿ ಆಕ್ರಮಣಶೀಲತೆ, ರಂಪಾಟ (ಉದ್ರೇಕದ ವರ್ತನೆ) ಅಥವಾ ವಿರೋಧಾತ್ಮಕ ನಡವಳಿಕೆಯನ್ನು ಪ್ರದರ್ಶಿಸಬಹುದು.
ಇಂತಹ ಸಮಸ್ಯೆಯಿರುವ ಮಕ್ಕಳು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಸಾಕಷ್ಟು ಉತ್ತೇಜಿತರಾಗಿರುವುದಿಲ್ಲ. ಆದುದರಿಂದ, ಅವರ ಹಿಂದಕ್ಕೆ ಸರಿಯುವಿಕೆಯು ಬಹಳ ಚಿಂತೆಗೆ ಕಾರಣವಾಗುತ್ತದೆ, ಎಂದು ವಿವರಿಸುತ್ತಾರೆ, ದಕ್ಷಿಣ ಕನ್ನಡದ ಸುರತ್ಕಲ್ನಲ್ಲಿರುವ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಶೈಕ್ಷಣಿಕ ಹಾಗೂ ಮನೋವೈದ್ಯ ಸಲಹೆಗಾರರಾಗಿರುವ ಡಾ. ಮಿಥುನ್ ಎಸ್.
“ತನ್ನ ಸುತ್ತ ಏನಾಗುತ್ತಿದೆ ಎಂದು ತಿಳಿಯದ ಮಗುವಿಗೆ, ತನ್ನನ್ನು ಒರಟು ಸ್ವಭಾವದವನು ಅಥವಾ ಸ್ವಭಾವದವಳು ಎಂದು ಯಾಕೆ ಕರೆಯುತ್ತಾರೆ ಎನ್ನುವ ಗೊಂದಲ ಮತ್ತು ಆತಂಕವನ್ನು ಊಹಿಸಿ,” ಎನ್ನುತ್ತಾರೆ ಡಾ. ಹೆಗ್ಡೆ. ಡಿಸಿಡಿ ಹೊಂದಿರುವ ಅನೇಕ ಮಕ್ಕಳು ಆತಂಕ ಮತ್ತು ಚಿಕಿತ್ಸೆ ರಹಿತ ಖಿನ್ನತೆಯಿಂದ ಬಳಲುತ್ತಾರೆ.
“ಇಂತಹ ಮಗು ಇತರ ಮಕ್ಕಳೊಂದಿಗೆ ಸೌಹಾರ್ಧ ಸಂಬಂಧ ಬೆಳೆಸಿಕೊಳ್ಲಲು ಸಿದ್ಧವಿಲ್ಲದ ಕಾರಣ, ಅದರೊಂದಿಗೆ ಸಂಭಾಷಣೆ ಮಾಡಿಕೊಂಡು ಕೆಲ ಸಮಯ ಯಾವುದಾದರೂ ಚಟುವಟಿಕೆ ಅಥವಾ ಆಟದ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ” ಎಂದು ಡಾ. ಮಿಥುನ್ ಸಲಹೆ ನೀಡುತ್ತಾರೆ.
ಸೂಚಕಗಳಿಂದ ರೋಗನಿರ್ಣಯ ಮಾಡುವಿಕೆ (ಮಾಡುವುದು)
ಡಾ. ಹೆಗ್ಡೆ ಅವರ ಪ್ರಕಾರ ಮಿದುಳಿನ ಸ್ಕ್ಯಾನ್ (ಬ್ರೇಯ್ನ್ ಸ್ಕ್ಯಾನ್) ಮಾಡುವುದರಿಂದ ಅಥವಾ ರೋಗಲಕ್ಷಣಗಳನ್ನು ಗಮನಿಸುವುದರಿಂದ ಡಿಸಿಡಿ ಎಂದು ರೋಗನಿರ್ಣಯ ಮಾಡುವುದು ಆಗಲಿಕ್ಕಿಲ್ಲ
“ಆದರೂ, ಯಾವುದೇ ರೋಗನಿರ್ಣಯ ವಿಧಾನದಿಂದ ಒರಟುತನದ ಅಥವಾ ಸಮನ್ವಯದ ಸವಾಲುಗಳಿಗೆ ಉತ್ತರ ದೊರೆಯದಿದ್ದರೆ, ರೋಗನಿರ್ಣಯವನ್ನು ಖಚಿತಪಡಿಸಿಕೊಳ್ಳಲು ನಾವು ಗನಿರ್ಣಯ ಮತ್ತು ಸಂಖ್ಯಾಶಾಸ್ತ್ರದ ಐದನೇ ಗ್ರಂಥ (ಡಿಎಸ್ಎಂ 5) ಅನುಸರಿಸುತ್ತೇವೆ,” ಎಂದು ಅವರು ವಿವರಿಸುತ್ತಾರೆ. “ಇದು ಗರ್ಭಧಾರಣೆಯಿಂದ ಪ್ರತಿಯೊಂದು ಬೆಳವಣಿಗೆಯ ಮೈಲಿಗಲ್ಲಿನ ಮಾಹಿತಿ ಒಳಗೊಂಡಿರುತ್ತದೆ. ಮಗು ಡಿಎಸ್ಎಂ 5 ಮಾನದಂಡದಡಿ ಬಂದರೆ ಮಾತ್ರ ನಾವು ಮಗು ಬೆಳವಣಿಗೆಯ ಸ್ಥಿತಿಯನ್ನು ಹೊಂದಿದೆಯೆಂದು ಪರಿಗಣಿಸಿ, ಅದನ್ನು ಅಭಿವೃದ್ಧಿ ಸಮನ್ವಯ ಪ್ರಶ್ನಾವಳಿಯನ್ವಯ ಹೆತ್ತವರ ವರದಿಯೊಂದಿಗೆ ವೃದ್ಧಿಗೊಳಿಸುತ್ತೇವೆ,” ಎಂದು ಅವರು ಹೇಳುತ್ತಾರೆ.
ಚಿಕಿತ್ಸೆಯ ಅದ್ಭುತಗಳು
ಡಾ. ಮಿಥುನ್ ಅವರ ಪ್ರಕಾರ ಚಟುವಟಿಕೆ ಆಧಾರಿತ ಚಿಕಿತ್ಸೆ, ದೈಹಿಕ ವ್ಯಾಯಾಮದ ಚಿಕಿತ್ಸೆ ಹಾಗೂ ನಡವಳಿಕೆಯ ಚಿಕಿತ್ಸೆಯೇ ಮೊದಲಾದವುಗಳ ಸಂಯೋಜನೆಯಿಂದ ಡಿಸಿಡಿ ಸಮಸ್ಯೆಯನ್ನು ಸುಧಾರಿಸಬಹುದು ಮಾತ್ರವಲ್ಲದೆ ಇತರ ಸಹವರ್ತಿ ಕಾಯಿಲೆಯಾದ ಚಂಚಲತೆ ಮತ್ತು ಅತಿಚಟುವಟಿಕೆಯ ಕಾಯಿಲೆ (ಅಟೆನ್ಶನ್ ಡೆಫಿಸಿಟ್/ಹೈಪರ್ಆಕ್ಟಿವಿಟಿ ದಿಸೊರ್ಡರ್ – ಎಡಿಎಚ್ಡಿ) ಸಮಸ್ಯೆಯನ್ನು ಕೆಲವು ಸಮಗ್ರ ಶೈಕ್ಷಣಿಕ ಘಟಕಗಳ (ಇಂಟೆಗ್ರೇಟಿವ್ ಎಜುಕೇಶನಲ್ ಮಾಡ್ಯೂಲ್) ಮತ್ತು ಔಷಧಿಗಳೊಂದಿಗೆ ವೈದ್ಯಕೀಯ ಚಿಕಿತ್ಸೆಯ (ಫಾರ್ಮಾಕೋಥೆರಪಿ) ಮೂಲಕ ಚಿಕಿತ್ಸೆ ನೀಡಬಹುದಾಗಿದೆ.
ಚಟುವಟಿಕೆ ಆಧಾರಿತ ಚಿಕಿತ್ಸೆಯು ಮಗು ಎದುರಿಸಬಹುದಾದ ಎಲ್ಲಾಸವಾಲುಗಳಿಗೆ ಉತ್ತರವಾಗಿ ರೂಪಿಸಲಾಗಿದೆ ಎಂದು ಹೇಳುವ ಡಾ. ವೆಂಕಟರಾಮನ್ ಅವರು ಮೂಲತ: ಉದ್ದೇಶವು ಬರೇ ವ್ಯಾಯಾಮಕ್ಕಿಂತ್ ಅದಷ್ಟು ಆಟವನ್ನು ಒಳಗೊಳ್ಳುವುದಾಗಿದೆ ಎನ್ನುತ್ತಾರೆ.
“ದೈಹಿಕ ವ್ಯಾಯಾಮದ ಹಾಗೂ ಚಟುವಟಿಕೆ ಆಧಾರಿತ ಚಿಕಿತ್ಸೆಯಿಂದಾಗಿ ತನ್ನ ಮಗನಿಗೆ ಅಗಾಧ ಲಾಭವಾಗಿದೆ ಮತ್ತು ಪ್ರತೀ ವಾರದ ಚಟುವಟಿಕೆಯ ಅವಧಿಗೆ (ಸೆಷನ್) ಎದುರುನೋಡುತ್ತಿದ್ದಾನೆ. ಈ‘ ಚಟುವಟಿಕೆಯ ಅವಧಿಗಳಲ್ಲಿ ಚಿಕಿತ್ಸಕ ಚಟುವಟಿಕೆಗಳು ಅಡಕವಾಗಿದ್ದು, ಸಂವೇದನಾ ಜೋಕಾಲಿ ಅವನಿಗೆ ಅಚ್ಚುಮೆಚ್ಚು,” ಎನ್ನುತ್ತಾರೆ ಅವೆಲ್ಲನ್.
ಜಾಗೃತಿ ವರ್ಧಿಸುವುದು
ಡಿಸಿಡಿ ಕಾಯಿಲೆ ಇರುವ ಮಗುವಿಗೆ ಸಹಾಯ ಮಾಡುವ ಮೊದಲ ಹೆಜ್ಜೆ ಅದರ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು. ಆಗ ಮಾತ್ರ ಮಗು ಎದುರಿಸುತ್ತಿರುವ ತೊಂದರೆಗಳನ್ನು ನಾವು ಅರ್ಥಮಾಡಿಕೊಳ್ಳಬಹುದು, ಎನ್ನುತ್ತಾರೆ ಅವೆಲ್ಲನ್. “ನನ್ನ ಮಗ ಶಿಶುವಾಗಿದ್ದಾಗ ನಾವು ಅವನ ಬೆಳವಣಿಗೆಯ ಮೈಲಿಗಲ್ಲುಗಳ ಬಗ್ಗೆ ನಿಗಾ ವಹಿಸುತ್ತಿದ್ದೆವು. ಆದರೆ, ಅಂಬೆಗಾಲಿಡುವ ಹೊತ್ತಿನಲ್ಲಿ ನಾವು ಹಾಗಿರಲಿಲ್ಲ. ಡಿಸಿಡಿ ಎಂದರೆ ಏನೇಂಬುದೇ ನಮಗೆ ತಿಳಿದಿರಲಿಲ್ಲ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ,
ಮಗು ತೊಂದರೆಗಳನ್ನು ಎದುರಿಸಿದಾಗ ಉತ್ತೇಜನದ ಮಾತುಗಳು ಮತ್ತು ಸಕಾರಾತ್ಮಕ ಪ್ರತಿಕ್ರಿಯೆ ಅಪಾರವಾಗಿ ಸಹಾಯ ಮಾಡುತ್ತವೆ. ಪೋಷಕರು, ಶಾಲಾ ಅಧಿಕಾರಿಗಳು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವುದರಿಂದ ಈ ಸ್ಥಿತಿಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಡಾ ಹೆಗ್ಡೆ ಅವರು ಹೇಳುತ್ತಾರೆ.
(ನವೆಂಬರ್ 29 ಅಂತರಾಷ್ಟ್ರೀಯ ಚಲನಾ ಅಸ್ವಸ್ಥತೆಯ ದಿನವಾಗಿದೆ. ಈ ಲೇಖನವು ಮಕ್ಕಳಲ್ಲಿ ದೈಹಿಕ ಮತ್ತು ಚಲನೆಯ ಸಮನ್ವಯದ ಮೇಲೆ ಪರಿಣಾಮ ಬೀರುವ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ.)