ಪಂಜಾಬಿನ ಬಟಿಂಡಾದ ಗುರ್ಪ್ರೀತ್ ಸಿಂಗ್ (ಹೆಸರು ಬದಲಾಯಿಸಲಾಗಿದೆ), ಅವರ ಕಾಲಿನಲ್ಲಿ ನೋವಿದ್ದು ಸಣ್ಣ ಚಲನೆಗಳು (ಬಾಗುವುದು ಮತ್ತು ಬಗ್ಗುವುದು) ಕೂಡಾ ದುಸ್ತರವಾಗಿತ್ತು. ಹೀಗೆ ಆರಂಭವಾದ ನೋವು ಪಾದಗಳಿಗೆ ಮತ್ತು ಹಿಮ್ಮಡಿಗಳಿಗೆ ಮತ್ತು ಅಲ್ಲಿಂದ ಮಂಡಿಗಳಿಗೆ ಹರಡಿತು. ಅವರ ಬೆಳಗಿನ ಜಾವವು ಅತ್ಯಂತ ಕೆಟ್ಟ ನೋವಿನೊಂದಿಗೆ ಆರಂಭವಾಗುತ್ತಿತ್ತು. ಅದರೊಂದಿಗೆ ನೋವಿನಿಂದ ಸುಡುವ ಸಂವೇದನೆ ಜೊತೆಗೆ ಕಾಲುಚೀಲಗಳನ್ನು (ಸಾಕ್ಸ್) ಧರಿಸುವುದೂ ಸಾಧ್ಯವಾಗುತ್ತಿರಲಿಲ್ಲ. ಅವರ ಪಾದಗಳಲ್ಲಿ ಕಂಡು ಬಂದಂತಹ ಸಣ್ಣ ಆಣಿಗಳು ದೊಡ್ಡದಾಗಿ ಊತವಾಗಿ ಸುತ್ತಲಿನ ಚರ್ಮವು ಕೆಂಪಾಗಿ ಹೊಳೆಯಲು ಆರಂಭವಾಯಿತು ಮತ್ತು ಹಸಿವಾಗುತ್ತಿರಲಿಲ್ಲ. ಮಲಬದ್ಧತೆ ಆಗುತ್ತಿತ್ತು ಅಲ್ಲದೆ ದೇಹದಲ್ಲಿ ನೋವು ಹೆಚ್ಚಾಗುತ್ತಿತ್ತು.
39-ವರ್ಷ ವಯಸ್ಸಿನ ಗುರ್ಪ್ರೀತ್ ಸಿಂಗ್ ತನ್ನ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಬಟಿಂಡಾದಲ್ಲಿನ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಸುಮಾರು ಒಂದು ವರ್ಷ ಕಾಲ, ಅವರ ಕಾಯಿಲೆಗೆ ಔಷಧಿಗಳಿಂದ ಚಿಕಿತ್ಸೆ ನೀಡಲಾಯಿತು. ಆದರೆ, ವಿಶೇಷ ಪ್ರಯೋಜನವಾಗಲಿಲ್ಲ. ಕೊನೆಯದಾಗಿ, ತನ್ನ ನೋವಿನ ಶಮನಕ್ಕೆ ಆಯುರ್ವೇದದ ಚಿಕಿತ್ಸೆ ಪಡೆಯಲು ಅವರು ನಿರ್ಧರಿಸಿದರು. ಅವರು ಹಿಮಾಚಲ ಪ್ರದೇಶದ ಪಾಪ್ರೋಲದಲ್ಲಿರುವ ರಾಜೀವ್ ಗಾಂಧಿ ಸ್ನಾತಕೋತ್ತಕ ಶಿಕ್ಷಣದ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರೊಫೆಸರ್ ಆಗಿರುವ ಡಾ. ಪ್ರಿಯಾ ಪ್ಯುಯೇಶ್ ಪರ್ಗೋತ್ರಾ ಅವರನ್ನು ಸಂಪರ್ಕಿಸಿದರು.
ಸಿಂಗ್ ಅವರ ಕಾಯಿಲೆ ಚಿಕಿತ್ಸೆಗಾಗಿ ಡಾ. ಪರ್ಗೋತ್ರಾ ಅವರು ಮಲವಿಸರ್ಜನೆ ಆಗುವಂತೆ ಮಾಡಲು (ಹರಳೆಣ್ಣೆ ಮತ್ತು ಹಾಲನ್ನೊಳಗೊಂಡ) ವಿರೇಚಕವನ್ನು ಕರುಳು ಶುದ್ಧಿಯಾಗಲು ದಿನಾಲೂ ಸೇವಿಸುವುದೇ ಮೊದಲಾದ ನಿರ್ವಹಣಾ ವಿಧಾನವನ್ನು ರೂಪಿಸಿದರು.
ಈ ಪ್ರಾಥಮಿಕ ಚಿಕಿತ್ಸೆಯ ನಂತರ ಸಿಂಗ್ ಅವರಲ್ಲಿ ಸಕಾರಾತ್ಮಕ ಪರಿಣಾಮ ಕಂಡುಬಂತು – ನೋವು ಕಡಿಮೆಯಾಗಿತ್ತು. ಆ ನಂತರದ 40 ದಿನಗಳಲ್ಲಿ ಆವರ ರೋಗಲಕ್ಷಣಗಳು ಮತ್ತು ನೋವು ಗಣನೀಯವಾಗಿ ಕಡಿಮೆಯಾಗಿತ್ತು. ಸಿಂಗ್ ಅವರಿಗೆ ನೀಡಲಾದ ಔಷಧಗಳಲ್ಲಿ ಆ್ಯಂಟಿ ಇನ್ಲ್ಫಮೇಟರಿ, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ರಿಮಾಟಿಕ್ ವಿರೋಧಿ ಗುಣಗಳುಳ್ಳ ಗಿಡಮೂಲಿಕೆಗಳಿದ್ದವು ಎಂದು ಹೇಳುತ್ತಾರೆ ಡಾ. ಪರ್ಗೋತ್ರಾ.
ಅದಲ್ಲದೆ, ಚಿಕಿತ್ಸೆ ಆರಂಭಿಸುವ ಮೊದಲು ಕರುಳನ್ನು ಸ್ವಚ್ಛಗೊಳಿಸುವುದರಿಂದ ಗಿಡಮೂಲಿಕೆಗಳ ಔಷಧಗಳು ಉದ್ದೇಶಿತ ಕಾಲಾವಧಿಯೊಳಗೆ ತನ್ನ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಇದರಿಂದ ಮತ್ತೆ ಮತ್ತೆ ನೋವು ಬರುವುದು ಮತ್ತು ರೋಗಲಕ್ಷಣಗಳು ಆರಂಭವಾಗುವ ಗಂಭೀರತೆ ಆಷ್ಟಾಗಿರುವುದಿಲ್ಲ.
ಆಯುರ್ವೇದ ವೈದ್ಯರ ಪ್ರಕಾರ, ಮೂಳೆ ಮತ್ತು ಕೀಲುಗಳ ಸಂಧಿವಾತದ ಚಿಕಿತ್ಸೆಯಲ್ಲಿ ಅವರು ಸೂಚಿಸುವಂತಹ ಸೂತ್ರಗಳಿಂದ ರೋಗಲಕ್ಷಣಗಳು ಕಡಿಮೆಯಾಗುತ್ತವೆ. ದೇಹದ ಚಿಕ್ಕ ಕೀಲುಗಳಲ್ಲಿ ಯೂರಿಕ್ ಆಮ್ಲವು ಅದರ ಕಣಗಳ ರೂಪದಲ್ಲಿ (ಮೊನೋ ಸೋಡಿಯಂ ಯೂರೇಟ್ ಕಣಗಳು) ಹೆಚ್ಚಾಗಿ ಶೇಖರಣೆಯಾದರೆ ಗೌಟಿ ಸಂಧಿವಾತದ ಲಕ್ಷಣಗಳು ಕಂಡುಬರುತ್ತವೆ. ಈ ಕಣಗಳು ಕೀಲುಗಳಲ್ಲಿ, ಪ್ರತ್ಯೇಕವಾಗಿ ಕೆಳಭಾಗದ ಅಂಗಗಳಲ್ಲಿ ಉರಿಯೂತದ ಬದಲಾವಣೆಗಳನ್ನು ಉಂಟುಮಾಡುತ್ತವೆ.
ಆಯುರ್ವೇದ ಮತ್ತು ಸಂಧಿವಾತ
ಆಯುರ್ವೇದ ಕುರಿತ ಪುಸ್ತಕಗಳಲ್ಲಿ "ವಾತರಕ್ತ" ಎನ್ನುವ ಪರಿಸ್ಥಿತಿಯ ಬಗ್ಗೆ ವಿವರ ದೊರೆಯುತ್ತದೆ. ಅದು ದೇಹದ ಕೆಳಗಿನ ಭಾಗಗಳಲ್ಲಿ, ವಿಶೇಷವಾಗಿ ಚಿಕ್ಕ ಕೀಲುಗಳಲ್ಲಿ ರಕ್ತದ ಹರಿವಿಗೆ ಸಂಬಂಧಪಟ್ಟಂತೆ ವಾಯು ಅಂಶಗಳ ಶರೀರಶಾಸ್ತ್ರದಲ್ಲಿ ಅಡಚಣೆಯಾದಲ್ಲಿ ಉದ್ಭವಿಸುತ್ತದೆ.
ಬಹುತೇಕ ಆಯುರ್ವೇದ ವೈದ್ಯರು ವತರಕ್ತ ಹಾಗೂ ಗೌಟಿ ಸಂಧಿವಾತದೊಂದಿಗೆ ಸಾಮ್ಯತೆ ಇದೆಯೆಂದು ಹೇಳುವುದಿಲ್ಲವಾದರೂ, ಇವೆರಡರ ರೋಗಲಕ್ಷಣಗಳು ಬಹಳ ಸಮೀಪವಾಗಿವೆ ಎನ್ನುತ್ತಾರೆ ಕರ್ನಾಟಕದ ಉಡುಪಿಯಲ್ಲಿರುವ ಧಾತ್ರಿ ಆಯುರ್ವೇದ ಕೇಂದ್ರದಲ್ಲಿ ಮುಖ್ಯ ಸಲಹೆಗಾರರಾಗಿರುವ ಡಾ. ಅಂಜಲಿ ಪಿ ಕೆ.
ಹೆಚ್ಚು ಉಪ್ಪು, ಹುಳಿಯಾಗಿರುವ ಮತ್ತು ಮಸಾಲೆಯುಕ್ತ ಆಹಾರವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದು ವಾಯುವಿನ ಅಂಶ (ವಾತ) ಹಾಗೂ ರಕ್ತವನ್ನು ಅಡ್ಡಿಪಡಿಸುತ್ತದೆ. ವಾಯುವಿನ ಅಂಶ ಮತ್ತು ರಕ್ತದ ವಿಶಿಷ್ಟ ಸಂಯೋಜನೆಯು ಚಿಕ್ಕ ಕೀಲುಗಳಲ್ಲಿರುವ ಚಿಕ್ಕ ರಕ್ತದ ನಾಳಗಳಲ್ಲಿ ಸಂಗ್ರಹವಾಗಿ ವಾತರಕ್ತದ (ಸಂಧಿವಾತ) ರೋಗಲಕ್ಷಣಗಳಿಗೆ ಎಡೆಮಾಡಿಕೊಡುತ್ತದೆಎಂದು ವಿವರಿಸುತ್ತಾರೆ ಡಾ. ಶ್ರೀನಿಧಿ ಎಸ್. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಚಕ್ರಪಾಣಿ ಆಯುರ್ವೇದಾಲಯ ಮತ್ತು ಪಂಚಕರ್ಮ ಕೇಂದ್ರದಲ್ಲಿ ಸಂಶೋಧಕರು ಹಾಗೂ ಪಂಚಕರ್ಮ ತಜ್ಞರು .
ದೇಹದ ಕೆಳಭಾಗದ ಕೀಲುಗಳೊಂದರಲ್ಲಿ ರೋಗಲಕ್ಷಣಗಳು ಮೊದಲು ಕಂಡುಬರುತ್ತವೆ ಎಂದು ವಿವರಿಸುತ್ತಾರೆ ಡಾ. ಅಂಜಲಿ. ಅಂತಹ ಸಂದರ್ಭದಲ್ಲಿ ವ್ಯಕ್ತಿಗಳಿಗೆ ಕಾಲುಗಳಲ್ಲಿ ಉರಿಯೂತದ ಸಂವೇದನೆಯುಳ್ಳ ”ಸೆಳೆತದಂತಹ ನೋವು” ಅನುಭವವಾಗಲು ಪ್ರಾರಂಭವಾಗುತ್ತಿದೆ. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಕಾಯಿಲೆಯು ಉಲ್ಭಣವಾಗಿ ಬಾಧಿತ ಭಾಗಗಳಲ್ಲಿ ತೀವ್ರ ನೋವು, ಊತ, ಕೆಂಪಾಗುವುದು ಹಾಗೂ ಬಿಗಿತ ಮೊದಲಾದ ಇತರ ರೋಗಲಕ್ಷಣಗಳು ಕಂಡುಬರುತ್ತವೆ.
ಕ್ರಿಯಾ ಯೋಜನೆ
“ಪ್ರತೀ ಪ್ರಕರಣದಲ್ಲೂ ಪರಿಕಲ್ಪನೆ ಒಂದೇ ಆಗಿದ್ದರೂ, ಕಾಯಿಲೆಯ ನಿರ್ವಹಣಾ ಯೋಜನೆ ಪ್ರತ್ಯೇಕ ಹಾಗೂ ತೀವ್ರತೆ , ವಯಸ್ಸು, ದೇಹದ ಪ್ರಕಾರ ಮತ್ತು ರೋಗಲಕ್ಷಣಗಳ ಗಂಭೀರತೆ ಮೊದಲಾದ ಅನೇಕ ಅಂಶಗಳನ್ನಾಧರಿಸಿ ರೂಪಿಸಲಾಗುತ್ತಿದೆ,” ಎನ್ನುತ್ತಾರೆ ಡಾ. ಶ್ರೀನಿಧಿ.
ನೋವಿನ ಶಮನಕ್ಕೆ ಔಷಧಯುಕ್ತ ತೈಲ (ಪರಿಷೇಕ) ಸಿಂಪಡಿಸುವಿಕೆ, (ನೋವಿಲ್ಲದೆ ಬರೇ ಉರಿಯೂತದ ಸಂವೇದನೆ ಇದ್ದಲ್ಲಿ ತೈಲ ಮರ್ದನ (ಮಸಾಜ್) ಮಾಡಲಾಗುತ್ತದೆ. ಅದರೊಂದಿಗೆ ಗುಗ್ಗುಲು ಧೂಪ ಅಥವಾ ಸಾಂಬ್ರಾಣಿ (ಗುಗ್ಗುಲು), ಅಮೃತ ಬಳ್ಳಿ (ಗಿಲೊಯ್) ಮತ್ತಿತರ ಕಹಿ ಗಿಡಮೂಲಿಕೆಗಳ ಔಷಧಗಳನ್ನೂ ಉಪಯೋಗಿಸಲಾಗುತ್ತಿದೆ. ಪ್ರತೀ ಚಿಕಿತ್ಸೆ ಮತ್ತು ಔಷಧಿಯನ್ನು ಆಯಾ ವ್ಯಕ್ತಿಯ ಅಗತ್ಯತೆ ಮತ್ತು ರೋಗಲಕ್ಷಣಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗುತ್ತಿದೆ.
ತೀವ್ರ ನೋವಿಗೆ ರಕ್ತಸ್ರಾವದ ಚಿಕಿತ್ಸೆ
”ಗೌಟಿ ಸಂಧಿವಾತದಲ್ಲಿ ತೀವ್ರ ನೋವು ಶಮನಗೊಳಿಸಲು ಜಿಗಣೆ (ಲೀಚ್ ಹುಳ), ಹವಾನಿಯಂತ್ರಿತ ಗಾಜಿನ ಕಪ್ಗಳನ್ನು ಚರ್ಮಕ್ಕೆ ಅನ್ವಯಿಸುವ (ಕಪ್ಪಿಂಗ್) ಹಾಗೂ ಸಿರವ್ಯಾಧ (ವೆನಿಪಂಕ್ಚರ್) ಮೊದಲಾದ ರಕ್ತಸ್ರಾವ ಮಾಡಿಸುವ ಚಿಕಿತ್ಸೆಗಳನ್ನು ಉಪಯೋಗಿಸಲಾಗುತ್ತಿದೆ,” ಎನ್ನುತ್ತಾರೆ ಡಾ. ಅಂಜಲಿ.
2020 ರಲ್ಲಿ ಮಾಡಲಾದ ಸಂಶೋಧನಾತ್ಮಕ ಅಧ್ಯಯನವೊಂದರಲ್ಲಿ 40 ಮಂದಿ ರಕ್ತಸ್ರಾವದ (ಲೀಚ್ ಹಾಗೂ ವೆನಿಪಂಕ್ಚರ್) ಚಿಕಿತ್ಸೆಯಲ್ಲಿ ಪಾಲ್ಗೊಂಡರು. ನೋವು ಶಮನಗೊಳಿಸುವುದರಲ್ಲಿ ಎರಡೂ ವಿಧದ ಚಿಕಿತ್ಸೆಗಳು ಸಮಾನವಾಗಿ ಪರಿಣಾಮಕಾರಿಯಾಗುತ್ತವೆ ಎಂದು ಸಂಶೋಧಕರು ಕಂಡುಹಿಡಿದರು. ಅದಲ್ಲದೆ ಈ ಚಿಕಿತ್ಸೆಗಳಿಗೆ ಅರಿವಳಿಕೆಯ ಅಗತ್ಯವಿಲ್ಲದೆ, ಅವುಗಳನ್ನು ಹೊರರೋಗಿಗಳ ಸಂದರ್ಶನದ ವೇಳೆಯೇ ಮಾಡಬಹುದಾಗಿದೆ.
ಆದರೆ, ಈ ಚಿಕಿತ್ಸೆಗಳಿಂದ ನೋವಿನ ಶಮನವಾಗುವುದು ತಾತ್ಕಾಲಿಕ. ಗಿಡಮೂಲಿಕೆಗಳನ್ನು ಉಪಯೋಗಿಸಿ ಮಾಡುವ ಪಂಚಕರ್ಮ ಚಿಕಿತ್ಸೆಗಳಾದ ಗುದದ್ವಾರದ ಮೂಲಕ ಕರುಳನ್ನು ಶುದ್ಧೀಕರಿಸುವ (ಎನೀಮಾ) ವಿಧಾನಗಳಿಂದ ದೀರ್ಘಕಾಲೀನ ಪ್ರಯೋಜನಗಳು ದೊರೆಯುತ್ತವೆ,ಎಂದು ಡಾ. ಅಂಜಲಿ ಹೇಳುತ್ತಾರೆ.
ಗಿಡಮೂಲಿಕೆಗಳ ಔಷಧಗಳು
ಒಬ್ಬ ವ್ಯಕ್ತಿಯು ಈ ಚಿಕಿತ್ಸೆಗಳಿಗೊಳಗಾದ ನಂತರ, ತಜ್ಞರು ರೋಗಲಕ್ಷಣಗಳ ಗಂಭೀರತೆಯನ್ನು ಗಮನದಲ್ಲಿರಿಸಿ ಅವರಿಗೆ ಸೂಕ್ತವಾದ ಗಿಡಮೂಲಿಕೆಗಳ ಔಷಧಿಗಳನ್ನು ನೀಡುತ್ತಾರೆ. ”ದೇಹದಾರ್ಢ್ಯತೆ ಕಾಪಾಡಲಿಕ್ಕಾಗಿ ನಾವು ಆಯ್ದ ಯೋಗಾಸನಗಳನ್ನೂ ಶಿಫಾರಸು ಮಾಡುತ್ತೇವೆ,” ಎಂದು ಡಾ. ಅಂಜಲಿ ವಿವಿರಿಸುತ್ತಾರೆ.
ಜೀವನಶೈಲಿ ನಿರ್ವಹಣೆಯ ಪಾತ್ರ
ಅಧಿಕ ಪ್ಯೂರಿನ್ (ಬಣ್ಣರಹಿತ ಸ್ಫಟಿಕದಂತಹ ಸಂಯುಕ್ತ) ಭರಿತ ಆಹಾರ (ಕೆಂಪು ಮಾಂಸ, ಚಿಪ್ಪುಮೀನು, ಪ್ರಾಣಿಗಳ ಪ್ರೋಟೀನ್, ಹಣ್ಣುಗಳ ಸಕ್ಕರೆ (ಫ್ರಕ್ಟೋಸ್) ಮತ್ತು ಮದ್ಯ) ಸಾಮಾನ್ಯವಾಗಿ ಈ ಸಮಸ್ಯೆಗೆ ಕಾರಣ.
ಆಯುರ್ವೇದ ವ್ಯವಸ್ಥೆಯಲ್ಲಿ ಕಾಯಿಲೆ ನಿರ್ವಹಣಾ ಯೋಜನೆ ಕೈಗೊಂಡು ನಿಜವಾದ ಚಿಕಿತ್ಸೆಗಳು ಪ್ರಾರಂಭವಾಗುವ ಮೊದಲು ಆಹಾರ ಕ್ರಮದಲ್ಲಿ ಹಾಗೂ ಜೀವನಶೈಲಿಯಲ್ಲಿ ಬದಲಾವಾಣೆಗಳು ಅಗತ್ಯ, ಎನ್ನುತ್ತಾರೆ ಉತ್ತರ ಪ್ರದೆಶದ ಆಲಿಘಡ್ನಲ್ಲಿರುವ ಆಲಿಘಡ್ ಯುನಾನಿ ಮತ್ತು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ಮೊಹಮ್ಮದ್ ತಾಂಝಿಲ್ ಅನ್ಸಾರಿ.
ತಾನು ನಡೆಸಿದ ಚಿಕ್ಕ ಮಟ್ಟದ ವೈದ್ಯಕೀಯ ಅಧ್ಯಯನವನ್ನು ಆಧರಿಸಿ ಡಾ. ಅನ್ಸಾರಿ ತನ್ನ ಮಾತನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ಅಧ್ಯಯನದಲ್ಲಿ ಭಾಗವಹಿಸಿದ 60 ಜನರನ್ನು ಎರಡು ತಂಡಗಳಲ್ಲಿ ವಿಭಜಿಸಲಾಗಿತ್ತು – ಒಂದರಲ್ಲಿ ನಿಯಮಿತ ಔಷಧಗಳೊಂದಿಗೆ ಜೀವನಶೈಲಿಯಲ್ಲಿ ಬದಲಾವಣೆಗಳಿದ್ದರೆ ಇನ್ನೊಂದರಲ್ಲಿ ಯಾವುದೇ ಜೀವನಶೈಲಿಯ ಬದಲಾವಣೆಗಳಿರಲಿಲ್ಲ. ಮೊದಲ ತಂಡದಲ್ಲಿದ್ದವರು ಎರಡನೇ ತಂಡಕ್ಕಿಂತ ಸಂಧಿವಾತ ನಿರ್ವಹಣೆಯಲ್ಲಿ ಉತ್ತಮ ಫಲಿತಾಂಶವನ್ನು ತೋರಿಸಿದುದನ್ನು ಅವರು ಗಮನಿಸಿದರು.
ಮಾಡಬೇಕಾಗಿದ್ದು ಮತ್ತು ಮಾಡಬಾರದ್ದು:
ಸೇವಿಸಬೇಡಿ:
- ಹುರುಳಿಕಾಳು, ಬದನೆ, ಮೊಸರು, ಕಬ್ಬು ಮತ್ತು ಹಲಸಿನ ಹಣ್ಣು
- ಮೈದಾ
- ಹೆಚ್ಚು ಪ್ಯೂರಿನ್ ಅಂಶಗಳಿರುವ ತರಕಾರಿಗಳು (ಅಸ್ಪರಾಗಸ್, ಬಸಳೆ, ಅವರೆಕಾಳು, ಕ್ವಾಲಿಫ್ಲವರ ಮತ್ತು ಅಣಬೆಗಳು)
- ಹಗಲುಹೊತ್ತಿನಲ್ಲಿ ಮಲಗುವುದು
- ಅತಿ ಹೆಚ್ಚು ಕೆಂಪು ಮಾಂಸ, ಸಾಗರದ ಮೀನು ಹಾಗೂ ಮದ್ಯ
ಸೇರಿಸಿಕೊಳ್ಳಿ
- ನಿಮ್ಮ ಆಹಾರದಲ್ಲಿ ಬಾರ್ಲಿ, ಬೆಲ್ಲ ಮತ್ತು ಶುಂಟಿ
- ಸೋರೆಕಾಯಿಗಳು (ಸೋರೆಕಾಯಿ, ಕುಂಬಳಕಾಯಿ, ಹೀರೆಕಾಯಿ ಮತ್ತು ಹಾಗಲಕಾಯಿ) ಮತ್ತು ಧಾರಾಳವಾಗಿ ದ್ರವಗಳು