ನಿಮ್ಮ ಮಗುವಿನಲ್ಲಿ ಇದನ್ನು ಪ್ರಯತ್ನಿಸಿ: ಕಾಲ್ಬೆರಳುಗಳನ್ನು ಮುಂದಕ್ಕೆ ಚಾಚಿ ಮತ್ತು ಹಿಮ್ಮಡಿಯ ಗಂಟುಗಳು ಪರಸ್ಪರ ಸ್ಪರ್ಶಿಸುವಂತೆ ಆತನನ್ನು/ಆಕೆಯನ್ನು ನೇರವಾಗಿ ನಿಲ್ಲಿಸಿ. ಅವರ ಮೊಣಕಾಲುಗಳು ಜೋಡುತ್ತವೆಯೇ ಅಥವಾ ದೂರದೂರ ಇವೆಯೇ ಎಂದು ಪರೀಕ್ಷಿಸಿ. ಮೊಣಕಾಲುಗಳು ಒಂದಕ್ಕೊಂದು ಸ್ಪರ್ಶಿಸದಿದ್ದರೆ, ನಿಮ್ಮ ಮಗುವಿಗೆಮಕ್ಕಳಲ್ಲಿ ಬಿಲ್ಲಿನಂತೆ ಬಾಗಿದ ಕಾಲುಗಳ ಸಮಸ್ಯೆ/ ಕಿಸುಗಾಲು ಸಮಸ್ಯೆ ಇರಬಹುದು. “ಮಕ್ಕಳ ಕಿಸುಗಾಲು ಸಮಸ್ಯೆ ಎಂದರೆ [ಅಥವಾ ಜೀನು ವರುಮ್] ಮಗುವಿನ ಕಾಲುಗಳು ಮೊಣಕಾಲುಗಳ ಭಾಗದಲ್ಲಿ ಹೊರಕ್ಕೆ ಬಾಗಿರುವ ಸ್ಥಿತಿಯಾಗಿದೆ. ಕಿಸುಗಾಲು/ಬಿಲ್ಲಿನಂತೆ ಬಾಗಿದ ಕಾಲುಗಳ ಸಮಸ್ಯೆ ಅಂಬೆಗಾಲಿಡುವ ಮಕ್ಕಳಲ್ಲಿ ಸಾಮಾನ್ಯವಾಗಿದೆ. ಇದು ಅವರ ಬೆಳವಣಿಗೆ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದೆ” ಎಂದು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿಯ ಹಿರಿಯ ಕನ್ಸಲ್ಟೆಂಟ್ ಡಾ.ಕವಿತಾ ಭಟ್ ಹೇಳುತ್ತಾರೆ. “
ನಾಲ್ಕು ವರ್ಷದ ಇನ್ಸಿಯಾಗೆ ಈ ಸಮಸ್ಯೆಯಿತ್ತು, ಆದರೆ ಅವಳ ಕುಟುಂಬಕ್ಕೆ ಮೊದಲು ಅದರ ಬಗ್ಗೆ ತಿಳಿದಿರಲಿಲ್ಲ. ಇತರ ಅಂಬೆಗಾಲಿಡುವ ಮಕ್ಕಳಂತೆ ಅವಳು ಓಡಲು ಬಯಸುತ್ತಿರಲಿಲ್ಲ. ನಡೆಯಲು ಅಥವಾ ಓಡಲು ಒತ್ತಾಯಿಸಿದಾಗ ಅವಳು ಅಳುತ್ತಿದ್ದಳು ಮತ್ತು ನಡಿಗೆಗೆ ಪ್ರತಿರೋಧ ತೋರುತ್ತಿದ್ದಳು. ಕೊನೆಗೆ ಏನೋ ಸರಿಯಿಲ್ಲ ಎಂದು ಅವಳ ಹೆತ್ತವರಿಗೆ ಅರಿವಾಯಿತು.
“ನಾವು ಅವಳಿಗೆ ಚಾಕೊಲೇಟ್ನ ಆಮಿಷ ನೀಡುವುದರಿಂದ ತೊಡಗಿ ಅವಳ ನೆಚ್ಚಿನ ಆಟಿಕೆಗಳೊಂದಿಗೆ ಓಡುವ ತನಕ ಎಲ್ಲಾ ಪ್ರಯತ್ನ ನಡೆಸಿದೆವು, ಆದರೆ ಅವಳಿಗೆ ನಡಿಗೆ ಆರಾಮದಾಯಕವಾಗಿರಲಿಲ್ಲ ಎಂದು ಅರಿವಾಯಿತು” ಎಂದು ಗುಜರಾತ್ನ ವಡೋದರದ ಉದ್ಯಮಿಯಾದ ಆಕೆಯ ತಂದೆ ನೂರುದ್ದೀನ್ ಚಲ್ಲಾವಾಲಾ ಹೇಳುತ್ತಾರೆ.
ಅವರು ಭೇಟಿಮಾಡಿದ ಪೀಡಿಯಾಟ್ರಿಷಿಯನ್ ಇನ್ಸಿಯಾಳ ಕಾಲುಗಳು ಬಾಗಿವೆ ಹಾಗೂ ತಪ್ಪಾಗಿ ಜೋಡಣೆಯಾದ ಮೂಳೆಗಳಿಂದಾಗಿ ಉಂಟಾಗುವ ನೋವಿನ ಕಾರಣಕ್ಕಾಗಿ ಅವಳು ನಡೆಯಲು ಪ್ರತಿರೋಧ ತೋರುತ್ತಿರಬಹುದು ಎಂದು ಅಭಿಪ್ರಾಯಪಟ್ಟರು.
ಹೆಚ್ಚಿನ ಮಕ್ಕಳಲ್ಲಿ, ಎರಡರಿಂದ ಮೂರು ವರ್ಷ ವಯಸ್ಸಿನಲ್ಲಿ ಕಾಲುಗಳು ಮರುಜೋಡಣೆಗೊಳ್ಳುತ್ತವೆ. ಆ ವಯಸ್ಸಿನ ನಂತರವೂ ಸಮಸ್ಯೆಯು ಸರಿಹೋಗದಿದ್ದರೆ, ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗಬಹುದು ಎಂದು ಮುಂಬೈನ ಎಸ್ಎಲ್ ರಹೇಜಾ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ. ಸಿದ್ದಾರ್ಥ್ ಷಾ ಹೇಳುತ್ತಾರೆ.
ಮಕ್ಕಳಲ್ಲಿ ಬಿಲ್ಲಿನಂತೆ ಬಾಗಿದ ಕಾಲುಗಳ ಸಮಸ್ಯೆಯುಂಟಾಗಲು ಕಾರಣವೇನು?
ಮಕ್ಕಳಲ್ಲಿ ಕಿಸುಗಾಲು ಸಮಸ್ಯೆ ಉಂಟಾಗಲು ಹಲವಾರು ಕಾರಣಗಳಿವೆ ಎಂದು ವೈದ್ಯರು ಹೇಳುತ್ತಾರೆ. ವಿಸ್ತೃತ ಇತಿಹಾಸದ ಬಗ್ಗೆ ಅರಿವಿನೊಂದಿಗೆ ಸಂಪೂರ್ಣ ದೈಹಿಕ ಪರೀಕ್ಷೆಯಿಂದ ಮಾತ್ರ ಕಾರಣವನ್ನು ನಿರ್ಧರಿಸಬಹುದಾಗಿದೆ.
ಡಾ. ಭಟ್ ಅವರ ಪ್ರಕಾರ, ಎಲ್ಲಾ ಶಿಶುಗಳಿಗೆ ಗರ್ಭದಲ್ಲಿದ್ದ ವೇಳೆಯ ತಮ್ಮ ನಿಲುವಿನಿಂದಾಗಿ ಜನನದ ವೇಳೆಯ ತಮ್ಮ ಕಾಲುಗಳ ಆಕಾರದಲ್ಲಿ ಸ್ವಲ್ಪ ವ್ಯತ್ಯಾಸವನ್ನು ತೋರಿಸುತ್ತವೆ.
“ಈ ಶಾರೀರಿಕ ಬಾಗುವಿಕೆಯು ಮೂರು ವರ್ಷಗಳವರೆಗೆ ಕಂಡುಬರುತ್ತದೆ. ಇದು ಮಗುವಿನ ನಡೆಯುವ, ಓಡುವ, ಏರುವ ಮತ್ತು ಆಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಮಗುವು ಸ್ವಲ್ಪ ದೊಡ್ದದಾದ ಬಳಿಕವೂ ಈ ಸಮಸ್ಯೆ ಸರಿಹೋಗದಿದ್ದರೆ, ಅದು ಬೆಳವಣಿಗೆ ಅಥವಾ ಮೂಳೆ ಅಸ್ವಸ್ಥತೆಯ ಸಂಕೇತವಾಗಿರಬಹುದು” ಎಂದು ಅವರು ಹೇಳುತ್ತಾರೆ.
ಇನ್ಸಿಯಾಳ ಪ್ರಕರಣದಲ್ಲಿ, ಆಕೆ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದುದು ಪರೀಕ್ಷೆಗಳಿಂದ ತಿಳಿದುಬಂತು. ನಂತರ ಆಕೆಗೆ ಸಪ್ಲಿಮೆಂಟ್ಗಳನ್ನು ಸೂಚಿಸಲಾಯಿತು. ಎರಡು ತಿಂಗಳೊಳಗೆ, ಅವಳು ತನ್ನ ಚಲನೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದಳು ಮತ್ತು ಅವಳ ಕಿಸುಗಾಲು ಸಮಸ್ಯೆಯು ಕಡಿಮೆಯಾಯಿತು.
ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ರಿಕೆಟ್ಸ್ ಮಕ್ಕಳ ಕಿಸುಗಾಲು/ ಬಿಲ್ಲಿನಂತೆ ಬಾಗಿದ ಕಾಲುಗಳ ಸಮಸ್ಯೆಯ ಸಾಮಾನ್ಯ ಕಾರಣವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೂಳೆಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ” ಎಂದು ಎಂದು ಡಾ.ಷಾ ಹೇಳುತ್ತಾರೆ.
ಡಾ ಭಟ್ ಪ್ರಕಾರ, “ಮಗುವಿನ ವಯಸ್ಸಿನ ಹೊರತಾಗಿ, ಶಾರೀರಿಕ ಬಾಗುವಿಕೆ ಮತ್ತು ರಿಕೆಟ್ಸ್ಗಳ ನಡುವಿನ ವ್ಯತ್ಯಾಸವೆಂದರೆ ರಿಕೆಟ್ಸ್ನಲ್ಲಿ ಹಲ್ಲುಗಳ ವಿರೂಪಗಳು, ಕುಂಠಿತ ಮಸಲ್ ಟೋನ್, ಕುಂಠಿತ ಬೆಳವಣಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಮೂಳೆ ವಿರೂಪಗಳಂತಹ ಇತರ ರೋಗಲಕ್ಷಣಗಳು ಕಂಡುಬರುತ್ತವೆ.”
ಮಕ್ಕಳಲ್ಲಿ ಬಿಲ್ಲಿನಂತೆ ಬಾಗಿದ ಕಾಲುಗಳು: ಸಮಸ್ಯೆಗೆ ಕಾರಣಗಳು ಹೀಗಿವೆ
- ಬ್ಲೌಂಟ್ಸ್ ಕಾಯಿಲೆ: ಇದು ಸ್ಥೂಲಕಾಯದ ಮಕ್ಕಳಲ್ಲಿ ಕಂಡುಬರುತ್ತದೆ ಮತ್ತು ಅತಿಯಾದ ತೂಕವು ಮೊಣಕಾಲುಗಳ ಸುತ್ತಲಿನ ಬೆಳವಣಿಗೆ ಫಲಕಗಳ ಮೇಲೆ ಪರಿಣಾಮ ಬೀರುತ್ತವೆ.
- ಅಸ್ಥಿರಜ್ಜು ಸಡಿಲತೆ/ ಲಿಗಮೆಂಟ್ ಲ್ಯಾಕ್ಸಿಟಿ: ಸಡಿಲವಾದ ಅಸ್ಥಿರಜ್ಜುಗಳೊಂದಿಗೆ ಜನಿಸಿದ ಮಗು ನಡೆಯುವಾಗ ಕಾಲುಗಳು ಹೊರಕ್ಕೆ ಬಾಗುತ್ತವೆ
- ಸ್ಕೆಲಿಟಲ್ ಡಿಸ್ಪ್ಲೇಸಿಯಾ: ಮೂಳೆ ಮತ್ತು ಕಾರ್ಟಿಲೆಜ್ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸ್ಥಿತಿ ಮತ್ತು ಕುಳ್ಳಗಿನ ಜನರಲ್ಲಿ ಕಿಸುಗಾಲು ಸಮಸ್ಯೆಯನ್ನು ಉಂಟುಮಾಡುತ್ತದೆ.
ಫುಟ್ಬಾಲ್ ಮತ್ತು ಬಿಲ್ಲಿನಂತೆ ಬಾಗಿದ ಕಾಲುಗಳು
ಉತ್ತರ ಅಮೆರಿಕಾದಲ್ಲಿ 1,344 ಫುಟ್ಬಾಲ್ ಆಟಗಾರರು ಮತ್ತು 1,277 ನಿಯಂತ್ರಣ ವ್ಯಕ್ತಿಗಳ ಮೇಲೆ ನಡೆಸಿದ ಮೂರು ಅಧ್ಯಯನಗಳ 2018 ರ ಮೆಟಾ-ಅನಾಲಿಸಿಸ್ ಪ್ರಕಾರ, ಬೆಳೆಯುತ್ತಿರುವ ವಯಸ್ಸಿನಲ್ಲಿ ಸಾಕರ್ ಆಟವನ್ನು ತೀವ್ರವಾಗಿ ಆಡುವುದು ಕಿಸುಗಾಲು ಸಮಸ್ಯೆಯನ್ನು ಉಂಟುಮಾಡಬಹುದು ಮತ್ತು ಇದು ಮೊಣಕಾಲಿನ ಸಂಧಿವಾತದ ಅಪಾಯವನ್ನು ಹೆಚ್ಚಿಸುತ್ತದೆ.
ಆದರೆ, ಕಿಸುಗಾಲು ಸಮಸ್ಯೆಯು ಫುಟ್ಬಾಲ್ ಅನ್ನು ಹವ್ಯಾಸವಾಗಿ ಆಡುವವರಲ್ಲಿ ಕಂಡುಬರುವುದಿಲ್ಲ ಬದಲಿಗೆ ಸಾಕರ್ ಆಟವನ್ನು ತೀವ್ರವಾಗಿ ಆಡುವ ಜನರಲ್ಲಿ ಮಾತ್ರ ಕಂಡುಬರುತ್ತದೆ.
ಮಕ್ಕಳ ಕಿಸುಗಾಲು ಸಮಸ್ಯೆಯನ್ನು ಸರಿಪಡಿಸುವುದು ಎಷ್ಟು ಮುಖ್ಯ?
“ಇತರ ಸಮಸ್ಯೆಗಳು ಉಂಟಾಗುವುದನ್ನು ತಪ್ಪಿಸಲು ಚಿಕ್ಕ ವಯಸ್ಸಿನಲ್ಲಿಯೇ ಸಮಸ್ಯೆಯನ್ನು ಗುರುತಿಸುವುದು ಮತ್ತು ಸರಿಪಡಿಸುವುದು ಮುಖ್ಯವಾಗಿದೆ. ಮಗುವಿನ ದೈನಂದಿನ ಚಟುವಟಿಕೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರದಿದ್ದಲ್ಲಿ ಕಿಸುಗಾಲು ಸಮಸ್ಯೆಯು ಕೆಲವೊಮ್ಮೆ ಕಡೆಗಣಿಸಲ್ಪಡುವ ಸಾಧ್ಯತೆಗಳಿವೆ” ಎಂದು ಡಾ. ಷಾ ತಿಳಿಸುತ್ತಾರೆ.
ತಮ್ಮ ಮಗಳು ನಡೆಯಲು ಪ್ರತಿರೋಧ ತೋರಿಸದಿದ್ದರೆ, ತಾವು ಬಹುಶಃ ಅವಳ ಕಾಲುಗಳ ಬಾಗುವಿಕೆಯನ್ನು ಗಮನಿಸುತ್ತಿರಲಿಲ್ಲ ಎನ್ನುವುದನ್ನು ಇನ್ಸಿಯಾಳ ತಂದೆ ಒಪ್ಪುತ್ತಾರೆ. ಈಗ, ಇನ್ಸಿಯಾ ನಡೆಯಲು ಪ್ರತಿರೋಧ ತೋರುತ್ತಿಲ್ಲ, ಅಷ್ಟೇ ಅಲ್ಲ ಅವಳಿಗೆ ಚೆನ್ನಾಗಿ ನಡೆಯಲು ಮತ್ತು ಓಡಲು ಸಾಧ್ಯವಾಗುತ್ತಿದೆ.
“ಬಾಲ್ಯದಲ್ಲಿಯೇ ಈ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ, ಇದು ಪ್ರೌಢಾವಸ್ಥೆಯವರೆಗೆ ಮುಂದುವರಿಯಬಹುದು, ಕ್ರೀಡೆಗಳಂತಹ ಕಷ್ಟಕರ ಚಟುವಟಿಕೆಗಳನ್ನು ಮಾಡುವಾಗ ದೇಹದ ಬಯೋಮೆಕಾನಿಕ್ಸ್ ಮೇಲೆ ಪರಿಣಾಮ ಬೀರಬಹುದು. ಕಾಲುಗಳು ಬಾಗುವುದರಿಂದ, ಮೊಣಕಾಲಿನ ಕೀಲುಗಳ ಉದ್ದಕ್ಕೂ ತೂಕವು ಸಮಾನವಾಗಿ ವಿತರಣೆಯಾಗುವುದಿಲ್ಲ ಮತ್ತು ಮೊಣಕಾಲಿನ ಒಳಭಾಗದಲ್ಲಿ ಹೆಚ್ಚು ಒತ್ತಡವುಂಟಾಗುತ್ತದೆ. ಇದು ಆರಂಭಿಕ ಮೊಣಕಾಲಿನ ಸಂಧಿವಾತ, ಬೆನ್ನು ಮತ್ತು ಕಾಲು ನೋವು ಮತ್ತು ನಡಿಗೆಯ ತೊಂದರೆಗಳಿಗೆ ಕಾರಣವಾಗಬಹುದು” ಎಂದು ಡಾ. ಷಾ ಅಭಿಪ್ರಾಯ ಪಡುತ್ತಾರೆ.
ಮಕ್ಕಳಲ್ಲಿ ಬಿಲ್ಲಿನಂತೆ ಬಾಗಿದ ಕಾಲುಗಳು – ಸಮಸ್ಯೆಗೆ ಚಿಕಿತ್ಸೆ
ಡಾ ಭಟ್ ಪ್ರಕಾರ, ಮಕ್ಕಳಲ್ಲಿ ಕಿಸುಗಾಲು ಸಮಸ್ಯೆಗೆ ಚಿಕಿತ್ಸೆ ನೀಡುವ ಮೊದಲ ಹಂತವೆಂದರೆ ಪೀಡಿಯಾಟ್ರಿಷಿಯನ್ ಅಥವಾ ಪೀಡಿಯಾಟ್ರಿಕ್ ಆರ್ಥೋಪೆಡಿಕ್ ಸರ್ಜನ್ ಸಹಾಯದಿಂದ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳುವುದು. ನಿಖರವಾದ ಕಾರಣವನ್ನು ಕಂಡುಕೊಂಡ ಬಳಿಕ, ಮಕ್ಕಳ ಮೂಳೆಗಳನ್ನು ಮರುರೂಪಿಸಬಹುದಾದ್ದರಿಂದ ಸರಿಪಡಿಸುವುದು ಸುಲಭವಾಗುತ್ತದೆ. ಸ್ಕೆಲಿಟಲ್ ಡಿಸ್ಪ್ಲೇಸಿಯಾಕ್ಕೆ ಹೆಚ್ಚಿನ ಚಿಕಿತ್ಸೆಗಳಿಲ್ಲ, ಆದರೆ ವಿಟಮಿನ್ ಡಿ ಸಪ್ಲಿಮೆಂಟ್ಗಳ ಮೂಲಕ ರಿಕೆಟ್ಸ್ ಅನ್ನು ಸರಿಪಡಿಸಬಹುದು. ಪರಿಸ್ಥಿತಿಯು ತೀವ್ರವಾಗಿದ್ದು ಪದೇ ಪದೇ ಮರುಕಳಿಸುತ್ತಿದ್ದರೆ, ಸರಿಪಡಿಸುವ ಶಸ್ತ್ರಚಿಕಿತ್ಸೆ ಸೂಕ್ತವಾಗಿರುತ್ತದೆ ಎಂದು ಅವರು ಸೇರಿಸುತ್ತಾರೆ.
ಸ್ಪ್ಲಿಂಟ್ಗಳು ಅಥವಾ ಕಾಲಿಗೆ ಧರಿಸಿರುವ ಬೆಲ್ಟ್ನಂತಿರುವ ಬ್ರೇಸ್ಗಳು ಆರಂಭಿಕ ಹಂತಗಳಲ್ಲಿ ಬ್ಲೌಂಟ್ಸ್ ಕಾಯಿಲೆಯಲ್ಲಿ ಬಾಗಿದ ಕಾಲುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ಡಾ ಷಾ ಹೇಳುತ್ತಾರೆ.
ಸರಿಪಡಿಸುವ ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸುತ್ತಾ, ಬಾಗಿದ ಮೂಳೆಯನ್ನು ಮುರಿದು ನೇರವಾಗಿಸಲಾಗುತ್ತದೆ ಎಂದು ಡಾ. ಷಾ ಹೇಳುತ್ತಾರೆ. ಮೂಳೆಗೆ ಹೊಸ ಜೋಡಣೆಗೆ ಹಾಕಿದ ನಂತರ, ಅದು ಗುಣವಾಗುವವರೆಗೆ ಅದನ್ನು ಸ್ಕ್ರೂಗಳ ನೆರವಿನಿಂದ ಪ್ಲೇಟ್ಗಳ ನಡುವೆ ಇರಿಸಲಾಗುತ್ತದೆ.
ಪೋಷಕರಿಗೆ ಕಿವಿಮಾತು
ಪೋಷಕರು ಜಾಗೃತರಾಗಿರಬೇಕು ಮತ್ತು ತಮ್ಮ ಮಕ್ಕಳನ್ನು ಗಮನಿಸುತ್ತಿರಬೇಕು ಎನ್ನುವುದು ಷಾ ಅವರ ಗಂಭೀರ ಸಲಹೆ. ಮಗು ಕುಂಟುತ್ತಿದ್ದರೆ, ನಡೆಯಲು ಕಷ್ಟಪಡುತ್ತಿದ್ದರೆ, ಬಿಲ್ಲಿನಂತೆ ಬಾಗಿದ ಕಾಲುಗಳ/ಕಿಸುಗಾಲುಗಳನ್ನು ಹೊಂದಿರುವಂತೆ ಕಾಣಿಸುತ್ತಿದ್ದರೆ ಅಥವಾ ಮೊಣಕಾಲುಗಳು ಅಥವಾ ಸೊಂಟದ ನೋವಿನ ಬಗ್ಗೆ ದೂರು ನೀಡಿದರೆ, ಅವರು ವೈದ್ಯರನ್ನು ಭೇಟಿ ಮಾಡಬೇಕು.
ಆದರೆ ತಮ್ಮ ಮಗುವಿಗೆ ಇನ್ನೂ ಮೂರು ವರ್ಷವಾಗಿರದಿದ್ದರೆ, ಭಯಭೀತರಾಗಬೇಡಿ ಮತ್ತು ವೈದ್ಯರ ಬಳಿಗೆ ಧಾವಿಸಬೇಡಿ ಹಾಗೂ ಪ್ರಕೃತಿಗೆ ಮೊದಲೊಂದು ಅವಕಾಶ ನೀಡಿ ಎಂದು ಅವರು ಪೋಷಕರಿಗೆ ತಿಳಿ ಹೇಳುತ್ತಾರೆ.